ಜೂ.16 ರಿಂದ 30 ರವರೆಗೆ ಗ್ರಾಮ ಮಟ್ಟದಲ್ಲಿ ಧರ್ತಿ ಆಬಾ ಅಭಿಯಾನ: ಜಿಲ್ಲಾಧಿಕಾರಿ

Dharti Aaba campaign at village level from June 16 to 30: Deputy Commissioner

ವಿಜಯನಗರ(ಹೊಸಪೇಟೆ) 13: ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಗುರಿ ನಮ್ಮದು, ಅದರ ಸದುಪಯೋಗ ಪಡೆದು ಮುಖ್ಯವಾಹಿನಿಗೆ ಬರುವ ಛಲ ಬುಡಕಟ್ಟು ಸಮುದಾಯಗಳದ್ದಾಗಲಿ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ತಿಳಿಸಿದರು.  

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರಿ​‍್ಡಸಿದ್ದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನ ಕಾರ್ಯಕ್ರಮದಡಿ ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಪ್ರಯೋಜನಗಳ ಶಿಬಿರ ಅನುಷ್ಠಾನದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಬುಧವಾರ ಅವರು ಮಾತನಾಡಿದರು,  

ಜಿಲ್ಲೆಯಲ್ಲಿ ಹೆಚ್ಚು ಪರಿಶಿಷ್ಟ ವರ್ಗಗಳ ಸಮುದಾಯದ ಜನರು ವಾಸಿಸುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿಯಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜೂ.16 ರಿಂದ 30 ರವರೆಗೆ ವಿವಿಧ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಪ್ರಚಾರದ ವಾಹನಗಳ ಮೂಲಕ ಪ್ರಚಾರ ಮಾಡಲಾಗುವುದು. ಅಯಾ ಹಳ್ಳಿಗಳಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಲು ನಮ್ಮ ಅಧಿಕಾರಿಗಳು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿದ್ದಾರೆ. ಸಮರ​‍್ಕ ಸೇವೆ ಪಡೆಯುವಲ್ಲಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಲಿ. ಅಭಿಯಾನದಡಿ ಗ್ರಾಮ ಮಟ್ಟದ ಶಿಬಿರಗಳಲ್ಲಿ ಆರೋಗ್ಯ, ಆಹಾರ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಕೃಷಿ, ಭೂಮಾಪನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಹಯೋಗವನ್ನು ಸಾಧಿಸುವುದರ ಮೂಲಕ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ನೇಮಿಸಲಾಗಿದೆ.  

ಬುಡಕಟ್ಟು ಸಮುದಾಯದವರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳು : ಆಧಾರ ಕಾರ್ಡ್‌, ರೇಷನ್ ಕಾರ್ಡ್‌, ಆಯುಷ್ಮಾನ್ ಕಾರ್ಡ್‌, ಜಾತಿ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌, ಜನ್ ಧನ್ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು (ಪಿಎಂಜೆಜೆಬಿವೈ, ಪಿಎಂಎಸ್ ಬಿವೈ), ಸಾಮಾಜಿಕ ಭದ್ರತಾ ಯೋಜನೆಗಳು ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು ನರೇಗಾ, ಪಿಎಂ ವಿಶ್ವಕರ್ಮ, ಮುದ್ರಾ ಸಾಲಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಿಎಂ ಮಾತೃ ವಂಧನ ಯೋಜನೆ(ಪಿಎಂಎಂವಿವೈ), ಐಸಿಡಿಎಸ್ ಸೌಲಭ್ಯಗಳು, ಲಸಿಕೆಕರಣ, ಸಿಕೆಲ್ ಸೆಲ್ ಅನಿಮೀಯಾ ಕುರಿತು ಜಾಗೃತಿ ಮೂಡಿಸುವುದು ಮತ್ತು ತಪಾಸಣೆ ಸೇರಿದಂತೆ ವಿವಿಧ ಯೋಜನೆಗಳ ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದರು.  

ಶಿಬಿರ ಹಮ್ಮಿಕೊಳ್ಳುವ ಗ್ರಾಮಗಳ ಮಾಹಿತಿ : ವಿಜಯನಗರ ಜಿಲ್ಲೆಯ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನ ಕಾರ್ಯಕ್ರಮದಡಿ ಆಯ್ಕೆಯಾದ ಗ್ರಾಮಗಳಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜೂ.16 ರಂದು ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ, ಹೊಸೂರು, ನರಸಾಪುರ ಗ್ರಾಮದಲ್ಲಿ, ಜೂ.17 ರಂದು ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ ಗ್ರಾಮದಲ್ಲಿ, ಜೂ.18 ರಂದು ಕೂಡ್ಲಿಗಿ ತಾಲೂಕಿನ ಜರ್ಮಲಿ, ಸಿಡಿಗಲ್ಲು, ಹುಲಿಕುಂಟ, ಹುರಡಿಹಳ್ಳಿ ಗ್ರಾಮಗಳಲ್ಲಿ, ಜೂ.19 ರಂದು ಕೂಡ್ಲಿಗಿ ತಾಲೂಕಿನ ಹುರುಳಿಹಾಳು, ಕುಮುತಿ, ಅಡವಿಸೂರನಹಳ್ಳಿ, ನರಸಿಂಹಗಿರಿ, ಜೂ.20 ರಂದು ಕೂಡ್ಲಿಗಿ ತಾಲೂಕಿನ  ಯರ‌್ರನಿಂಗನಹಳ್ಳಿ, ಗಂಡುಬೊಮ್ಮನಹಳ್ಳಿ,  ಮೀನುಕೆರೆ, ಚಿರತುಗುಂಡು, ಜೂ.21 ರಂದು ಪಾಲಯನಕೋಟೆ, ಜಮ್ಮೋಬನಹಳ್ಳಿ,  ಸೂಲದಹಳ್ಳಿ, ಜೂ.22 ರಂದು ತಿಪ್ಪೆಹಳ್ಳಿ, ನಾಗೇನಹಳ್ಳಿ, ಜೂ.23 ರಂದು ಹರಪನಹಳ್ಳಿ ತಾಲೂಕಿನ ಆನಂತಹಳ್ಳಿ, ನಿಚ್ಚವನಹಳ್ಳಿ, ಜೂ.24 ರಂದು ಹರಪನಹಳ್ಳಿ ತಾಲೂಕಿನ ಕೂಮಾರನಹಳ್ಳಿ, ಕಂಬತ್ರಹಳ್ಳಿ ಗ್ರಾಮಗಳಲ್ಲಿ  ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.  

ಈ ವೇಳೆ ಸಭೆಯಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ವೇತಾ, ಅಹಾರ ಇಲಾಖೆ ಉಪನಿರ್ದೇಶಕ ಆರೀಫ್, ಆಯುಷ್ ಇಲಾಖೆಯ ಡಾ.ಮುನಿವಾಸುದೇವ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.