ಮಳೆಯಲ್ಲೂ ದೇವಿ ದರ್ಶನ ಪಡೆದ ಭಕ್ತರು

ಮಳೆಯಲ್ಲೂ ದೇವಿ ದರ್ಶನ ಪಡೆದ ಭಕ್ತರು   Devotees had darshan of the goddess even in the rain

ಉಗರಗೋಳ  26:  ನವರಾತ್ರಿ ಉತ್ಸವದ ಪ್ರಯುಕ್ತ ಸಮೀಪದ ಯಲ್ಲಮ್ಮನಗುಡ್ಡಕ್ಕೆ ಶುಕ್ರವಾರ ಭಕ್ತಸಾಗರವೇ ಹರಿದುಬಂದಿತ್ತು.  ಮಳೆಯನ್ನೂ ಲೆಕ್ಕಿಸದೆ ಲಕ್ಷಾಂತರ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಶುಕ್ರವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದರೂ, ಗುಡ್ಡಕ್ಕೆ ಬರುವ ಭಕ್ತರಿಗೇನು ಕೊರತೆ ಇರಲಿಲ್ಲ. 

ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಯಲ್ಲಮ್ಮನ ಸನ್ನಿಧಿಗೆ ಆಗಮಿಸಿದರು. ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು. 

ಸತತವಾಗಿ ಮಳೆ ಸುರಿಯುತ್ತಿದ್ದ ಕಾರಣ, ಕೊಡೆ ಹಿಡಿದುಕೊಂಡು, ತಲೆ ಮೇಲೆ ವಸ್ತ್ರ ಮತ್ತು ಪ್ಲಾಸ್ಟಿಕ್ ಹಾಕಿಕೊಂಡು, ಗಂಟೆಗಟ್ಟಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ‘ಎಲ್ಲರ ಅಮ್ಮ‘ ಯಲ್ಲಮ್ಮ ದೇವಿ ದರ್ಶನ ಪಡೆದರು. 

ಯಲ್ಲಮ್ಮ ದೇವಸ್ಥಾನದಲ್ಲಿ ಅಳವಡಿಸಿದ್ದ ದೀಪಗಳಿಂದ ಎಣ್ಣೆ ಹಾಕಿ, ತಮ್ಮ ಬಾಳು ದೀಪದಂತೆ ಬೆಳಗುತ್ತಿರಲಿ ಎಂದು ಪ್ರಾರ್ಥಿಸಿದರು. 

ರಸ್ತೆಬದಿ ಒಲೆ ಹೂಡಿ ಅಡುಗೆ ಮಾಡುವವರಿಗೂ ವರುಣ ಅಡ್ಡಿಪಡಿಸಿದ ಕಾರಣ, ಜನರು ತಲೆ ಮೇಲೆ ತಾಡಪತ್ರಿಗಳನ್ನು ಹಿಡಿದು ಅವುಗಳ ಆಸರೆಯೊಂದಿಗೆ ಅಡುಗೆ ಮಾಡಿ ಶ್ರೀರೇಣುಕಾ ಯಲ್ಲಮ್ಮ ದೇವಿಗೆ ಪರಡಿ ತುಂಬಿ ಪೂಜೆ ಮಾಡಿದರು. 

ಮತ್ತೊಂದೆಡೆ ವ್ಯಾಪಾರಹಿವಹಿವಾಟು ಮಳೆಯಲ್ಲೇ ಸಾಗಿದ್ದವು. ಮಳೆಹನಿಗಳಿಂದ ನೆನೆಯುತ್ತಲೇ ನೂರಾರು ವ್ಯಾಪಾರಸ್ಥರು ತಮ್ಮ ಗೂಡಂಗಡಿಗಳಲ್ಲಿ ಎಣ್ಣೆ, ತೆಂಗಿನಕಾಯಿ, ಕರ​‍್ೂರ, ಬಾಳೆಹಣ್ಣು ಮತ್ತು ವಿವಿಧ ಪೂಜಾ ಸಾಮಗ್ರಿಗಳನ್ನು ಮಾರಿದರು. 

ಆದರೆ, ಭಕ್ತರ ಸಂಖ್ಯೆಗೆ ಅನುಗುಣವಾಗಿ ಪೊಲೀಸರು ಇರಲಿಲ್ಲ. ಬೆರಳೆಣಿಕೆ ಪೊಲೀಸರಷ್ಟೇ ಕರ್ತವ್ಯಕ್ಕೆ ನಿಯೋಜನೆಗೊಂಡ ಕಾರಣ, ಗುಡ್ಡಕ್ಕೆ ಸಾಗುವ ಮಾರ್ಗಗಳಲ್ಲಿ ತಮ್ಮ ವಾಹಣವನ್ನು ಬೀಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದಾಗಿ ಟ್ರಾಫಿಕ್ ಸಮಸ್ಯೆ ಪದೆ ಪದೆ ತಲೆದೋರಿತು. 

ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು.  ಯುವಕರ ಪಡೆಗಳು ಭಂಡಾರದಲ್ಲಿ ಮಿಂದೆದ್ದವು. 

ಬೆಳಿಗ್ಗೆಯಿಂದ ಮೋಡ ಕವಿದು ಸಚಿಜೆಯಾದರೂ ಸತತವಾಗಿ ತುಂತುರ ಮಳೆಯಾಯಿತು.