ಪುತ್ತರಾಜ ಗವಾಯಿ ಪುಣ್ಯಾಶ್ರಮದಲ್ಲಿ ಪಾರದರ್ಶಕ ಆಡಳಿತಕ್ಕೆ ಭಕ್ತರ ಒತ್ತಾಯ: ಅನಿಲ್ ಮೆಣಸಿನಕಾಯಿ

ಪುತ್ತರಾಜ ಗವಾಯಿ ಪುಣ್ಯಾಶ್ರಮದಲ್ಲಿ ಪಾರದರ್ಶಕ ಆಡಳಿತಕ್ಕೆ ಭಕ್ತರ ಒತ್ತಾಯ: ಅನಿಲ್ ಮೆಣಸಿನಕಾಯಿ Devotees demand transparent administration at Puttaraja Gawai shrine: Anil Menasinakai

ಲೋಕದರ್ಶನ ವರದಿ 

 ಗದಗ 29: ಕರ್ನಾಟಕದ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ಪುತ್ತರಾಜ ಗವಾಯಿ ಅವರ ಪುಣ್ಯಾಶ್ರಮದ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಹಾಗೂ ಭಕ್ತರ ವಿಶ್ವಾಸವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಅನಿಲ್ ಮೆಣಸಿನಕಾಯಿ ಒತ್ತಾಯಿಸಿದ್ದಾರೆ.  

ಪುಣ್ಯಾಶ್ರಮವು ಬಡವರು, ಅನಾಥರು ಹಾಗೂ ವಿಶೇಷವಾಗಿ ದೃಷ್ಟಿಹೀನರಿಗೆ ಶಿಕ್ಷಣ, ವಸತಿ ಮತ್ತು ಸಂಗೀತ ಸೇವೆ ನೀಡುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಶ್ರಮದ ನಿರ್ವಹಣೆ ಹಾಗೂ ಆಡಳಿತ ಸಂಬಂಧಿತವಾಗಿ ವಿವಿಧ ರೀತಿಯ ಪರೀಶೀಲನೆಗಳು, ಸಾರ್ವಜನಿಕ ಚರ್ಚೆಗಳು ಮತ್ತು ಭಕ್ತರಲ್ಲಿನ ಆತಂಕಗಳು ವ್ಯಕ್ತವಾಗುತ್ತಿವೆ.  

ಈ ಹಿನ್ನೆಲೆಯಲ್ಲಿ ಭಕ್ತರು ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಆಸ್ತಿಗಳ ನಿರ್ವಹಣೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಗತ್ಯವಿದ್ದಲ್ಲಿ ಸಂಬಂಧಿತ ತನಿಖಾ ಸಂಸ್ಥೆಗಳ ಮೂಲಕ ಸಂಪೂರ್ಣ ಪರೀಶೀಲನೆ ನಡೆಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.  

ಅದೇ ವೇಳೆ ಆಶ್ರಮದ ಮೂಲ ಉದ್ದೇಶಗಳಾದ ಶಿಕ್ಷಣ, ಅನ್ನದಾನ, ಸಂಗೀತ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.  

ಆಶ್ರಮದ ಗೌರವ, ಪರಂಪರೆ ಹಾಗೂ ಭಕ್ತರ ನಂಬಿಕೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ಯಾವುದೇ ತಪ್ಪುಗಳು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣವೇ ಸ್ಪಷ್ಟತೆ ನೀಡಬೇಕು ಎಂದು ಭಕ್ತರು ಹೇಳಿದ್ದಾರೆ.