ಕನ್ನಡ ಸಾಹಿತ್ಯಕ್ಜೆ ದೇವರ ದಾಸಿಮಯ್ಯರ ಕೊಡುಗೆ ಅಪಾರ: ಪ್ರಕಾಶ ಹಳಿಯಾಳ

ಕನ್ನಡ ಸಾಹಿತ್ಯಕ್ಜೆ ದೇವರ ದಾಸಿಮಯ್ಯರ ಕೊಡುಗೆ ಅಪಾರ: ಪ್ರಕಾಶ ಹಳಿಯಾಳ Devara Dasimayya's contribution to Kannada literature is immense: Prakash Haliyal

ಲೋಕದರ್ಶನ ವರದಿ 

ಧಾರವಾಡ: ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯರ ಕೊಡುಗೆ ಅಪಾರವಾಗಿದೆ.  ಅವರು ವಚನ ಸಾಹಿತ್ಯವನ್ನು ರಚಿಸಿ, ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಅವರು ಹೇಳಿದರು. 

ಅವರು ಇಂದು (ಮಾ.23) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

ದಾಸಿಮಯ್ಯ ಅವರ ವಚನಗಳು ಸರಳತೆ, ಸಮಾನತೆ ಹಾಗೂ ಭಕ್ತಿ ತತ್ವಗಳನ್ನು ಸಾರುತ್ತವೆ. ಅವರು ಜಾತಿ ಬೇಧವನ್ನು ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಮಹಾನ್ ಸಂತರು. ಅವರ ಸಂದೇಶಗಳು ಇಂದಿನ ಸಮಾಜದಲ್ಲಿಯೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. 

ಬೆಂಗಳೂರು ದೇವಾಂಗ ಸಮಾಜದ ಸಂಘಟನಾಕಾರ ರವೀಂದ್ರ ಪಾಟೀಲ ಅವರು ಮಾತನಾಡಿ, ಮಕ್ಕಳನ್ನು ಕೇವಲ ಆಟ-ಪಾಠಗಳಲ್ಲೇ ತೊಡಗಿಸುವುದರಿಂದ ಅವರ ಮನರಂಜನೆ ಮತ್ತು ಮೂಲಭೂತ ಶಿಕ್ಷಣ ಬೆಳೆಯುತ್ತದೆ.  

ನಮ್ಮ ಪೂರ್ವಜರು ಯಾವ ರೀತಿಯ ವೃತ್ತಿಗಳನ್ನು ಮಾಡುತ್ತಿದ್ದರು, ಅವರು ಎದುರಿಸಿದ ಸವಾಲುಗಳು ಏನು, ಅವರು ಹೇಗೆ ಶ್ರಮಪಟ್ಟು ಜೀವನ ನಡೆಸಿದರು ಎಂಬುದನ್ನು ಮಕ್ಕಳಿಗೆ ವಿವರಿಸಿದರೆ, ಅವರು ಶ್ರಮದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳಲ್ಲಿ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜವಾಬ್ದಾರಿತನದ ಗುಣಗಳು ಬೆಳೆಯುತ್ತವೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ದೇವಾಂಗ ಸಂಘ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ, ದೇವಾಂಗ ಸಂಘ ಅಧ್ಯಕ್ಷ ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ ದೇವಾಂಗ ನೇಕಾರ ಅಭಿವೃದ್ದಿ ಸಂಘದ ಅಧ್ಯಕ್ಷ ರವಿ ಲೋಲಿ, ಗರಗ ಹಾಗೂ ಹಂಗರಕಿ ದೇವಾಂಗ ಸಮಾಜದ ಅಧ್ಯಕ್ಷ ಜಗದೀಶ ಜವಳಿ ಅವರು ಮಾತನಾಡಿದರು.  

ವೇದಿಕೆಯಲ್ಲಿ ದೇವಾಂಗ ಶಕ್ತಿ ಮಹಿಳಾ ಮಂಡಳದ ಅಧ್ಯಕ್ಷೆ ಡಾ. ರಾಧಾ ಅಶೋಕ ಗೌಡರ, ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಕುಸುಬಿ, ಸಮಾಜದ ಮುಖಂಡ ರಾಮು ತಾವರೆ ಉಪಸ್ಥಿತರಿದ್ದರು. 

ಧಾರವಾಡ ಹಿರೇಮಲ್ಲೂರ ಈಶ್ವರನ ಮಹಾವಿದ್ಯಾಲಯ ಅಧ್ಯಾಪಕ ಡಾ. ಈರಣ್ಣ ಇಂಜಗನೇರಿ ಅವರು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜೀವನ ಚರಿತ್ರೆ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. 

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.