ರಾಯಬಾಗ 27: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಯ ಪೌರಕಾರ್ಮಿಕರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯತ ಆವರಣದಲ್ಲಿ ಮಂಗಳವಾರ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಪೌರ ಕಾರ್ಮಿಕರಿಗೆ ಜ್ಯೋತಿ ಸಂಜೀವಿನಿ, ಕೆ.ಜಿ.ಐ.ಡಿ. ಸೇರಿದಂತೆ ಸರಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡುವುದು ಮತ್ತು ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡರ್ಸ, ಕ್ಲೀನರ್ಸ, ವಾಹನ ಚಾಲಕರು, ನೀರು ಸರಬುರಾಜು, ಗಾರ್ಡೇನರ್, ಸೈನೇಟರಿ ಸೂಪರ್ ವೈಸರ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಅಳವಡಿಸುವುದು. ದಿನಗೂಲಿ ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರನ್ನು ಖಾಯಂ ಮಾಡುವುದು, ವಿಶೇಷ ನೇಮಕಾತಿ ಅಡಿಯಲ್ಲಿ ಎಸ್.ಎಫ್.ಸಿ. ಅನುದಾನದಿಂದ ವೇತನ ನೀಡಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಪೌರ ಕಾರ್ಮಿಕರ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ಬಳ್ಳಾರಿ, ತಾಲೂಕಾಧ್ಯಕ್ಷ ಗಣೇಶ ಬಳ್ಳಾರಿ, ಉಪಾಧ್ಯಕ್ಷ ವಸಂತ ಮಾಳಿ, ಕಾರ್ಯದರ್ಶಿ ದಯಾನಂದ ಹೊಸಮನಿ, ವಿನಾಯಕ ಮಾಳಿ, ವಿಠ್ಠಲ ಯಡ್ರಾವೆ, ನಾಗೇಶ ಬಳ್ಳಾರಿ, ಸುರೇಂದ್ರ ಬಳ್ಳಾರಿ, ರಾಮಾ ಬಳ್ಳಾರಿ ಸೇರಿ ಅನೇಕರು ಇದ್ದರು. ಚಿಂಚಲಿ ಪಟ್ಟಣದಲ್ಲಿ: ಪೌರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಚಿಂಚಲಿ ಪಟ್ಟಣ ಪಂಚಾಯತ ಎದುರು ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಸ್ಥಳಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರಿಂದ ಮನವಿ ಸ್ವೀಕರಿಸಿದರು. ಚಿಂಚಲಿ ಪ.ಪಂ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ಪೌರಕಾರ್ಮಿಕರಾದ ಗೋಪಾಲ ಪರೀಟ, ನಾಮದೇವ ಟೊಣ್ಣೆ, ರವಿ ಖೋತ, ಶ್ರಾವಣ ಕಾಂಬಳೆ, ಮೀರಾಸಾಬ ಕೋಥಳಿ, ಸಂಜು ನಿಂಗನೂರೆ ಹಾಗೂ ಸಿಬ್ಬಂದಿ ಇದ್ದರು.