ಪತ್ರಕರ್ತ ಶಿವಶರಣ ಅವರಿಗೆ ಜೀವ ಬೆದರಿಕೆ: ಪ್ರಕರಣ ಖಂಡಿಸಿದ ವಿನೋದ್ ಖೇಡ್

ಪತ್ರಕರ್ತ ಶಿವಶರಣ ಅವರಿಗೆ ಜೀವ ಬೆದರಿಕೆ: ಪ್ರಕರಣ ಖಂಡಿಸಿದ ವಿನೋದ್ ಖೇಡ್  Death threat to journalist Shivasharana: Vinod Khed condemns the incident

ಲೋಕದರ್ಶನ ವರದಿ 

 ವಿಜಯಪುರ, ಆ.27: ಪತ್ರಕರ್ತ ಪರಶುರಾಮ ಶಿವಶರಣ ಅವರಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ ಪ್ರಕರಣವನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಅಂಗವಿಕಲ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ್ ಖೇಡ್, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  

ಪತ್ರಕರ್ತರು ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ನುಗ್ಗಿ ಬೆದರಿಕೆ ಹಾಕಿರುವುದು ಖಂಡನೀಯ. ಇಂತಹ ಕೃತ್ಯಗಳಿಂದ ಅಕ್ರಮ ದಂಧೆಗಳನ್ನು ಮುಚ್ಚಿಹಾಕಲು ಯತ್ನಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಅವರು ಹೇಳಿದರು.  

ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಂಧೆ ವ್ಯಾಪಕವಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಅವರು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಸಂಘಟನೆಯ ರಾಜು ತಡಲಗಿ, ಸಂತೋಷ ಕಲಗುರಿ, ರಾಜು ಕುಮಟಗಿ, ಮಲ್ಲಿಕಾರ್ಜುನ ಗಣೀ, ಅಂಬಣ್ಣ ಗುನ್ನಾಪುರ, ಬಾಬು ಕೋಟಿಗುಂಡಿ, ಅನಿಲ್ ಪವಾರ್, ಅಶೋಕ ವಾಲಿಕಾರ, ಪರಶುರಾಮ ಕುಚಬಾಳ, ಅನಿಲ್ ಇಕಡೆ ಹಾಗೂ ಅಶೋಕ ಚೊಳಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.