ಬೂದಿಹಾಳ-ಪೀರಾಪೂರ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭ

ಬೂದಿಹಾಳ-ಪೀರಾಪೂರ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭ  Day and night dharna begins demanding completion of Boodihal-Pirapur project

ತಾಳಿಕೋಟಿ 12: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಕೊನೆಯ ಹಂತದ ಎಫ್‌ಐಸಿ(ಹೊಲಗಾಲುವೆ) ಕಾಲುವೆ ನಿರ್ಮಾಣ ಮಾಡಿ ರೈತರ ಜಮೀನುಗಳಿಗೆ ನೀರಿನ ಅನುಕೂಲತೆ ಮಾಡಿಕೊಡುವಂತೆ ಆಗ್ರಹಿಸಿ ತಾಳಿಕೋಟಿ ತಾಲೂಕಿನ 38 ಹಳ್ಳಿಗಳ ರೈತರು ಕೊಡಗಾನೂರ ಕ್ರಾಸ್ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಶನಿವಾರದಿಂದ ಆರಂಭಿಸಿದರು.  

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಬೂದಿಹಾಳ ಪೀರಾಪೂರ ಏತ ನೀರಾವರಿಯ ಈ ಯೋಜನೆ ಶೇ. 90ರಷ್ಟು ಮುಗಿದಿದ್ದು ಇನ್ನು ಕೇವಲ ಶೇ.10ರಷ್ಟು ಮಾತ್ರ ಉಳಿದಿದೆ. ಈ ಕೊನೆಯ ಹಂತದ ಕಾಮಗಾರಿಯಲ್ಲಿ ಎಫ್‌ಐಸಿ ಕಾಲುವೆ ನಿರ್ಮಾಣ ಮಾಡಬೇಕಾಗಿದೆ ಇದಕ್ಕೆ ಕೇವಲ 170 ಕೋಟಿ ಅಗತ್ಯವಿದೆ ಆದರೆ ನಮ್ಮ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ತಾಲೂಕಿನ ಈ ಭಾಗದ ರೈತರು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ರೈತ ಈ ದೇಶದ ಬೆನ್ನೆಲುಬು ಎಂದು ಹೇಳುವ ನಮ್ಮನ್ನು ಆಳುವವರು ರೈತರ ಬೆನ್ನೆಲುಬನ್ನು ವ್ಯವಸ್ಥಿತವಾಗಿ ಮುರಿಯುತ್ತಿದ್ದಾರೆ. ರೈತರ ಕುರಿತು ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದ ಅವರು ಈ ನಮ್ಮ ಹೋರಾಟ ಪಕ್ಷಾತೀತವಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಶಾಂತಿ ಪೂರ್ಣವಾಗಿ ಅಹೋರಾತ್ರಿ ಈ ಹೋರಾಟ ನಡೆಸುತ್ತೇವೆ. ಸರ್ಕಾರ ರೈತರ ತಾಳ್ಮೆ ಪರೀಕ್ಷಿಸಬಾರದು ಆದಷ್ಟು ಬೇಗ ಈ ನಮ್ಮ ಸಮಸ್ಯೆಯನ್ನು ಪರಿಹರಿಸಬೇಕು ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.  

ರೈತ ಮುಖಂಡರಾದ ಪ್ರಭುಗೌಡ ಬಿರಾದಾರ ಅಸ್ಕಿ, ಸುರೇಶಕುಮಾರ ಪೀರಾಪೂರ, ಸಾಹೇಬಗೌಡ ಯಾಳಗಿ ಹಾಗೂ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ ಮಾತನಾಡಿ ರೈತರ ಕುರಿತು ಸರ್ಕಾರದ ಧೋರಣೆಯನ್ನು ಖಂಡಿಸಿ ಆದಷ್ಟು ಬೇಗ ನಮ್ಮ ಈ ನ್ಯಾಯೋಜಿತವಾದ ಬೇಡಿಕೆಯನ್ನು ಮನ್ನಿಸಬೇಕು. ಇಲ್ಲದಿದ್ದಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.  

ರೈತರ ಮೊದಲ ದಿನದ ಈ ಹೋರಾಟಕ್ಕೆ ಖ್ಯಾತ ನೇತ್ರ ತಜ್ಞ, ಸಮಾಜ ಸೇವಕ ಡಾ.ಪ್ರಭುಗೌಡ ಲಿಂಗದಳ್ಳಿ ಹಾಗೂ ದಲಿತ ಸೇನೆ ತಾಲೂಕ ಘಟಕದ ಪದಾಧಿಕಾರಿಗಳು ತಮ್ಮ ಬೆಂಬಲವನ್ನು ಸೂಚಿಸಿದರು.  

ರೈತ ಸಂಘದ ತಾಲೂಕ ಅಧ್ಯಕ್ಷ ಬಾಲಪ್ಪ ಗೌಡ ಲಿಂಗದಳ್ಳಿ, ರೈತ ಮುಖಂಡರಾದ ಶಂಕರಗೌಡ ದೇಸಾಯಿ(ಶಳ್ಳಗಿ), ಮಲ್ಲನಗೌಡ ಪೊಲೀಸ್ ಪಾಟೀಲ, ಡಾ.ಪ್ರಭುಗೌಡ ಬಿರಾದಾರ, ಆನಂದಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ರಾಜುಗೌಡ ಇಬ್ರಾಹಿಂಪೂರ, ರಾಯನಗೌಡ ನೀರಲಗಿ, ಶಿವಪುತ್ರ ಚೌದರಿ, ಗುರುರಾಜ್ ಪಡಶೆಟ್ಟಿ, ಬಸನಗೌಡ ಹಳ್ಳಿಪಾಟೀಲ, ಪ್ರಕಾಶಗೌಡ ಪಾಟೀಲ ಕಾರಗನೂರ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಸಂಗನಗೌಡ ಕೋಳೂರು, ಶ್ರೀನಿವಾಸ ಗೊಟಗುಣಕಿ, ಶಿವನಗೌಡ ಬಿರಾದಾರ ಹಾಗೂ ವಿವಿಧ ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.