ಸಂಶೋಧನಾ ಮನೋಭಾವ, ಕೌಶಲ್ಯ ಬೆಳೆಸಿಕೊಳ್ಳಿ

ಸಂಶೋಧನಾ ಮನೋಭಾವ, ಕೌಶಲ್ಯ ಬೆಳೆಸಿಕೊಳ್ಳಿ  Cultivate a research mindset and skills

ಲೋಕದರ್ಶನ ವರದಿ 

ಧಾರವಾಡ 22: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ಉದ್ಯೋಗ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸೆಮಿನಾರ್ಗಳು, ಕೈಗಾರಿಕಾ ಭೇಟಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ. ಅಜಿತ್ ಪ್ರಸಾದ್ ಹೇಳಿದರು.  

ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2026-27ನೇ ಸಾಲಿಗೆ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೀಕ್ಷಾಬೋಧ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.   

ಎಂ.ಎಸ್ಸಿ., ಎಂ.ಕಾಂ. ಹಾಗೂ ಎಂ.ಎ. ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ವಾತಾವರಣ, ನಿಯಮ-ನಿಬಂಧನೆಗಳು ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು. ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್‌ಎಸ್‌ಎಸ್ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು.  

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಡಾ. ಅಜಿತ್ ಪ್ರಸಾದ್ ಸನ್ಮಾನಿಸಿ ಅಭಿನಂದಿಸಿದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ಡಾ. ಶಿಲ್ಪಾ ನಾಯಕ್ ವಂದಿಸಿದರು.  ಚೈತ್ರಾ ಕೊಕಾಟಿ ಕಾರ್ಯಕ್ರಮ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಡಾ. ಶಾಲ್ಮಲಾ ರತ್ತಾಕರ, ಡಾ. ಶಿಲ್ಪಾ ನಾಯಕ್, ಡಾ. ಜ್ಯೋತಿ ಅಕ್ಕಿ, ಡಾ. ಶಶಿಕಾಂತ,  ರಜಿನಿ ತಾಳಿಕೋಟಿ, ಮುರಳೀಧರ ಹೆಗಡೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.