ಮಳೆಗಾಲದಲ್ಲಿ ಸೊಳ್ಳೆ ನಿಯಂತ್ರಿಸಿ, ರೋಗ ಮುಕ್ತರಾಗಿರಿ: ಸಾರ್ವಜನಿಕರಿಗೆ ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಕರೆ

ಮಳೆಗಾಲದಲ್ಲಿ ಸೊಳ್ಳೆ ನಿಯಂತ್ರಿಸಿ, ರೋಗ ಮುಕ್ತರಾಗಿರಿ: ಸಾರ್ವಜನಿಕರಿಗೆ ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಕರೆ Control mosquitoes during the rainy season and stay disease-free: DHO Dr. Yalla Rameshbabu appeals t

ಬಳ್ಳಾರಿ  26 :  ಮಳೆಗಾಲದ ಆರಂಭದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಸಂಗ್ರಹಕಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವ ಮೂಲಕ ಹಾಗೂ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಳ್ಳದಂತೆ ನೀರು ಸರಾಗವಾಗಿ ಹರಿಯಲು ಬಿಡುವುದರಿಂದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ವಿನಂತಿಸಿದ್ದಾರೆ.*ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಕ್ಕೆ ಕರೆ:* 

ಮನೆಯ ಸುತ್ತಮುತ್ತ ಹಾಗೂ ಮೇಲ್ಭಾಗದಲ್ಲಿ, ಹೂವಿನ ಕುಂಡಗಳು, ಟಿನ್, ಪ್ಲಾಸ್ಟಿಕ್ ಕಪ್‌ಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇವು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗುತ್ತವೆ. ನೀರು ಸಂಗ್ರಹಿಸುವ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಮಡಿಕೆ ಮುಂತಾದವುಗಳನ್ನು ನೀರು ತುಂಬುವ ಮುನ್ನ ಚೆನ್ನಾಗಿ ತಿಕ್ಕಿ ತೊಳೆದು, ಸರಿಯಾಗಿ ಮುಚ್ಚಳ ಮುಚ್ಚಬೇಕು ಎಂದು ಹೇಳಿದ್ದಾರೆ.*ಸಿಡಿಲು-ಮಿಂಚಿನ ಸಂದರ್ಭದಲ್ಲಿ ಸುರಕ್ಷತೆ ಮುಖ್ಯ:* 

ಮಾನ್ಸೂನ್ ಮಳೆಯ ಆರಂಭದಲ್ಲಿ ಗುಡುಗು, ಮಿಂಚು ಸಹಿತ ಮಳೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ ಬಯಲು ಪ್ರದೇಶದಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಒಂದು ವೇಳೆ ಆಶ್ರಯ ಪಡೆಯಲು ಯಾವುದೇ ತಗ್ಗು ಪ್ರದೇಶವಿಲ್ಲದೆ ಬಯಲಿನಲ್ಲೇ ಇರಬೇಕಾಗಿ ಬಂದರೆ, ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಂಡು ಕುಳಿತುಕೊಳ್ಳಬೇಕು. ಇದು ಮಿಂಚಿನಿಂದ ಮೆದುಳು ಮತ್ತು ಹೃದಯಕ್ಕೆ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮರಗಳಿರುವ ಪ್ರದೇಶದಲ್ಲಿದ್ದರೆ ತಕ್ಷಣವೇ ಅಲ್ಲಿಂದ ಹೊರಬರುವುದು ಸುರಕ್ಷಿತ ಎಂದು ಅವರು ತಿಳಿಸಿದ್ದಾರೆ.*ಕಲುಷಿತ ನೀರು ಮತ್ತು ವಾಂತಿ-ಭೇದಿ ನಿಯಂತ್ರಣಕ್ಕೆ ಕ್ರಮ:* 

ಮಳೆಯಿಂದಾಗಿ ನೀರಿನ ಮೂಲಗಳಿಗೆ ಹೊಸ ನೀರು ಬಂದು ಸೇರುವುದರಿಂದ, ಶುದ್ಧೀಕರಿಸದ ನೀರನ್ನು ಕುಡಿದರೆ ವಾಂತಿ-ಭೇದಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾರ್ವಜನಿಕರು ಕ್ಲೋರಿನೇಷನ್ ಕೈಗೊಂಡು ಶುದ್ಧೀಕರಿಸಿದ ಕುಡಿಯುವ ನೀರು ಅಥವಾ ಶುದ್ಧೀಕರಣ ಘಟಕದ ನೀರನ್ನೇ ಬಳಸಬೇಕು. ಸಾಧ್ಯವಿದ್ದಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ, ಸೋಸಿ ಕುಡಿಯಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಊಟಕ್ಕೆ ಮುಂಚೆ ಮತ್ತು ಶೌಚಾಲಯದ ಬಳಕೆಯ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಶೌಚಾಲಯವನ್ನೇ ಬಳಸಬೇಕು.*ಆತಂಕ ಬೇಡ, ಆಸ್ಪತ್ರೆಗಳಲ್ಲಿ ಓಷಧಿ ದಾಸ್ತಾನು ಇದೆ:* 

ಮೇ, ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ವಾತಾವರಣ ಬದಲಾಗುವುದರಿಂದ ಸಾರ್ವಜನಿಕರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಓಷಧಿಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ, ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.