“ಸೋಶಿಯಲ್ ಮಿಡಿಯಾ ಕರಾಳ, ಪತ್ರಿಕೆಯಿಂದ ನಿರಾಳ” ಸಂಸ್ಕಾರ-ಜಾಗೃತಿ ಸಂದೇಶ ನೀಡಿದ ಚಿಣ್ಣರು

“ಸೋಶಿಯಲ್ ಮಿಡಿಯಾ ಕರಾಳ, ಪತ್ರಿಕೆಯಿಂದ ನಿರಾಳ” ಸಂಸ್ಕಾರ-ಜಾಗೃತಿ ಸಂದೇಶ ನೀಡಿದ ಚಿಣ್ಣರು Children give a message of cultural awareness

ಲೋಕದರ್ಶನ ವರದಿ 

ಮಹಾಲಿಂಗಪುರ 05: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಕ್ಕಳ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. 

ಬೆದರುಬೊಂಬೆ ವೇಷದಲ್ಲಿ ಮುಖ ತೋರಿಸದೇ ಅಡ್ಡಾದಿಡ್ಡಿ ದೇಹ ಅಲ್ಲಾಡಿಸಿ ಮಾಡಿದ ಬಾಲಕರ ನೃತ್ಯ ಹಾಗೂ ಪುಟಾಣಿಗಳ ವಿಡಂಬನಾತ್ಮಕ ವಿನೂತನ ಫ್ಯಾಶನ್‌ಶೋ ನಕ್ಕು ನಗಿಸಿತು. ಅದರಲ್ಲೂ ಆದರ್ಶ ವಿದ್ಯಾರ್ಥಿನಿಯಾಗಿ ಆಯ್ಕೆಯಾದ ಸೃಷ್ಟಿ ಕೆಂಪಯ್ಯ ಕುಂದಿ ಅಭಿನಯಿಸಿದ ಕಾಂತಾರ ದೈವದ ನೃತ್ಯ ಸಾಮರಸ್ಯದ ಸಂದೇಶ ಮತ್ತು ಧೈವಾರಾಧನೆಯ ಸಂದೇಶ ನೀಡಿದ್ದಲ್ಲದೇ ವೇದಿಕೆಗೆ ಧೈವೀ ಕಳೆ ನೀಡಿತು. 

ಆ್ಯಂಡ್ರಾಯ್ಡ್‌ ಮೋಬೈಲ್, ವಾಟ್ಸಪ್, ಫೇಸಬುಕ್, ಇನ್ಸಾ-್ಟಗ್ರಾಂ, ಗೂಗಲ್, ಯೂಟ್ಯೂಬ್ ಗಳಂಥ ಸಾಮಾಜಿಕ ಜಾಲತಾಣಗಳ ಸುಳಿಗೆ ಸಿಲುಕಿ ಡಿಜಿಟಲ್ ಆಕ್ರಮಣಕ್ಕೆ ಒಳಗಾಗುವ ಹೆಣ್ಣು ಮಗುವಿನ ಮನಸ್ಥಿತಿ, ಪರಿಸ್ಥಿತಿ ಬಗ್ಗೆ ಮತ್ತು ಅದಕ್ಕೆ ಪರಿಹಾರಾರ್ಥವಾಗಿ ಪುಸ್ತಕ ಮತ್ತು ಪತ್ರಿಕೆಯ ಓದು, ಆಟೋಟಗಳ ಉಪಯುಕ್ತತೆ ಬಗ್ಗೆ ಜಾಗೃತಿ ಮೂಡಿಸುವ “ಸೋಶಿಯಲ್ ಮಿಡಿಯಾ ಕರಾಳ, ಪತ್ರಿಕೆಯಿಂದ ನಿರಾಳ ” ಎಂಬ ಸಂದೇಶದ ಕಿರುನಾಟಕ ಕಂಬನಿ ಮತ್ತು ಆನಂದ ಭಾಷ್ಪ ಎರಡನ್ನೂ ಉಂಟು ಮಾಡಿತು.  

ಇದಕ್ಕೂ ಮುನ್ನ ಜ್ಯೀತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಬಸವರಾಜ ಢಪಳಾಪೂರ, ಸಂತೋಷ ಹುದ್ದಾರ, ಮುಖ್ಯ ಶಿಕ್ಷಕ ಅಮೀತ ಚಮಕೇರಿ, ಸಿಆರ್‌ಸಿ ಎ.ಎಂ.ಮಂಚದ, ಪದವಿ ಪ್ರಾಚಾರ್ಯ ಎನ್‌.ಬಿ.ಪಾಟೀಲ, ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ಸಚಿನ ಅಂಗಡಿ ವೇದಿಕೆ ಮೇಲಿದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಶಿಕ್ಷಕರಾದ ಅಮೀತ ಚಮಕೇರಿ, ಜೆ.ಎಸ್‌.ಹಿರೇಮಠ, ಕೆ.ಎಂ.ಹುನಗುಂದ, ಎಸ್‌.ಎಸ್‌.ಜಂಗಮಶೆಟ್ಟಿ, ಆರ್‌.ಬಿ.ಪಾಶ್ಚಾಪೂರ, ಎಂ.ಎಸ್‌.ಹಡಪದ, ಎಸ್‌.ಎಂ.ಪತ್ತಾರ, ಎಸ್‌.ಆರ್‌.ಕುಲಕರ್ಣಿ, ಎ.ಆರ್‌.ರಾಠೋಡ, ಎಸ್‌.ಎಂ.ಅಂಬಿ, ಡಿ.ಎಸ್‌.ಕುಂದರಗಿ, ಆರ್‌.ಎಂ.ಮಠಪತಿ, ಪಿ.ಎಸ್‌.ಬರಗಲ್, ಎಲ್‌.ಎಂ.ಮಠಪತಿ, ಎಸ್‌.ಎನ್‌.ಸಣ್ಣಕ್ಕಿ ಇದ್ದರು.