ಕೇಂದ್ರ ಸರಕಾರದ ಆಯ-ವ್ಯಯ: ಅಶೋಕಸ್ವಾಮಿ ಹೇರೂರ ಅಸಮದಾನ
ಗಂಗಾವತಿ 02: ಫೆಬ್ರುವರಿ 1ರಂದು ಮಂಡಿಸಲಾದ ಕೇಂದ್ರ ಸರಕಾರದ ಆಯ-ವ್ಯಯ ಪಟ್ಟಿಯಲ್ಲಿ ದರೋಜಿ-ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗ ರಚನೆಗೆ ಅನುದಾನ ಸಿಗದಿರುವುದಕ್ಕೆ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳದ ನಿಕಟ ಪೂರ್ವ ನಿರ್ದೇಶಕ ಅಶೋಕಸ್ವಾಮಿ ಹೇರೂರ ತಮ್ಮ ಅಸಮದಾನ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗೆ ಕೊಪ್ಪಳಕ್ಕೆ ಆಗಮಿಸಿದ್ದ ರೇಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅನುದಾನದ ನೀಡುವ ಆಶ್ವಾಸನೆ ನೀಡಿದ್ದರು, ಆದರೂ ಅನುದಾನ ದೊರೆತಿಲ್ಲ. ಆದ್ದರಿಂದ ಹೆಚ್ಚುವರಿ ಆಯ-ವ್ಯಯ ಪಟ್ಟಿಯಲ್ಲಿ ಈ ಯೋಜನೆಗೆ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಮುಂದೆ ರಾಜ್ಯ ಸರಕಾರ ಮಂಡಿಸುವ ಆಯ-ವ್ಯಯ ಪಟ್ಟಿಯಲ್ಲಿ ರಾಜ್ಯದಿಂದ ಅರ್ಧದಷ್ಟು ಅನುದಾನ ನೀಡಲು, ಸಚಿವರು ಮತ್ತು ಶಾಸಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.ಇದರಿಂದ ಉಳಿದ ಹಣವನ್ನು ಕೇಂದ್ರದಿಂದ ಪಡೆಯಲು ಅನುಕೂಲವಾಗುತ್ತದೆ ಎಂದಿದ್ದಾರೆ. ಮುನಿರಾಬಾದ್-ಮಹಿಬೂಬ್ ನಗರ ರೇಲ್ವೆ ಕಾಮಗಾರಿಗೆ ರೂ.214.05 ಕೋಟಿಅನುದಾನ ನೀಡಿರುವುದನ್ನುಅವರು ಸ್ವಾಗತಿಸಿದ್ದಾರೆ. ಸಿಂಧನೂರ ನಿಂದ ರಾಯಚೂರು ಸಂಪರ್ಕಿಸಿರುವ ರೇಲ್ವೆ ಕಾಮಗಾರಿ ತೀವ್ರಗತಿಯಲ್ಲಿ ಸಾಗಲು ಇದರಿಂದ ಸಾಧ್ಯವಾಗಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.ಗದಗ-ವಾಡಿ ಮಾರ್ಗದ ಯೋಜನೆಗೆ ರೂ.549.45 ಕೋಟಿ ಮತ್ತು ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ತಿನೈಘಾಟ-ವಾಸ್ಕೋ ಡಿ ಗಾಮಾ ರೇಲ್ವೆ ಮಾರ್ಗದ ಯೋಜನೆಗೆ ರೂ.413.73 ಕೋಟಿ ಅನುದಾನ ನೀಡಿರುವ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಅಶೋಕಸ್ವಾಮಿ ಹೇರೂರ ಸಂತೋಷ ವ್ಯಕ್ತಪಡಿಸಿದ್ದಾರೆ.