ಭೈರತಿ ಬಸವರಾಜ್ ಫೆ. 21ರವರೆಗೆ ಸಿಐಡಿ ವಶಕ್ಕೆ

ಭೈರತಿ ಬಸವರಾಜ್ ಫೆ. 21ರವರೆಗೆ ಸಿಐಡಿ ವಶಕ್ಕೆ Bhairati Basavaraj remanded in CID custody till Feb. 21

ಬೆಂಗಳೂರು 15: ರೌಡೀಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಶಾಸಕ ಭೈರತಿ ಬಸವರಾಜ್ರನ್ನು ಫೆ.21ರವರೆಗೆ ಸಿಐಡಿ ಕಸ್ಟಡಿಗೆ ನೀಡಿ 42ನೇ ಎಸಿಜೆಎಂ ಕೋರ್ಟ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಪರೀಕ್ಷೆಗಳ ಬಳಿಕ ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ಕೋರ್ಟ್‌ ಜಡ್ಜ್‌ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಗಿತ್ತು. ಸಿಐಡಿ ಪೊಲೀಸರ ಪರ ಎಸ್ಪಿಪಿ ಅಶೋಕ್ ನಾಯ್ಕ್‌ ಈ ವೇಳೆ ಹಾಜರಿದ್ದರು.  

ಜಡ್ಜ್‌ ನಿವಾಸದ ಬಳಿ ಎಸ್ಪಿಪಿ ಅಶೋಕ್ ನಾಯ್ಕ್‌ ಪ್ರತಿಕ್ರಿಯೆ ನೀಡಿದ್ದು, ಭೈರತಿ ಬಸವರಾಜ್ ಅವರ ಬಂಧನದ ಬಳಿಕ ಮೆಡಿಕಲ್ ಟೆಸ್ಟ್ಗೆ ಹಾಜರುಪಡಿಸಲಾಗಿತ್ತು. ಟೆಸ್ಟ್‌ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಗೊತ್ತಾಗಿದ್ದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಬೌರಿಂಗ್ ವೈದ್ಯರು ತಿಳಿಸಿದ್ದರು. ವೈದ್ಯರ ವರದಿ ಆಧರಿಸಿ ಚಿಕಿತ್ಸೆಗೆ ನ್ಯಾಯಾಧೀಶರು ಕೂಡ ಸೂಚನೆ ನೀಡಿದ್ದರು. ಸದ್ಯ ಭೈರತಿ ಬಸವರಾಜ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಬಹುತೇಕ ಎಲ್ಲವೂ ಸಹಜವಾಗಿದೆ ಎಂದು ವೈದ್ಯಕೀಯ ವರದಿ ಬಂದಿದೆ ಎಂದರು.  

ಶಾಸಕ ಭೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ವರ್ತೂರು ಪ್ರಕಾಶ್, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎಸ್‌.ಹರೀಶ್ ಒಳಗೊಂಡ ತಂಡ ಭೈರತಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದೆ.  

ನಂತರ ಮಾತನಾಡಿರುವ ವಿಜಯೇಂದ್ರ, ಬಿಎಸ್ವೈ ಬಗ್ಗೆ ಭೈರತಿ ಇಟ್ಟ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗಲ್ಲ. ಎಲ್ಲವೂ ಕೂಡ ನಮ್ಮ ಪರೀಕ್ಷೆಯ ಸಮಯ. ತಂದೆ, ಕುಟುಂಬದ ಮೇಲೆ ಹಾಕಿದ್ದ 25-30 ಕೇಸ್ ಎದುರಿಸಿದ್ದೇನೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದೆ. ನಾನು, ಯಡಿಯೂರ​‍್ಪ, ಪಕ್ಷ ಅವರ ಜೊತೆ ಇದ್ದೇ ಇರುತ್ತೇವೆ ಎಂದರು.