ಬಂಡಾಯದ ಕಹಳೆ ಮೊಳಗಿಸಿದ ಹಲಗಲಿ ಬೇಡರು: ತಿಮ್ಮಾಪೂರ

ಬಂಡಾಯದ ಕಹಳೆ ಮೊಳಗಿಸಿದ ಹಲಗಲಿ ಬೇಡರು: ತಿಮ್ಮಾಪೂರ Bagalkot Independence day celebration

ಬಾಗಲಕೋಟೆ 15:  ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳನ ಹಲಗಲಿಯ ಬೇಡರು ಬ್ರಿಟಿಷರ ವಿರುದ್ದ ಬಂಡಾಯದ ಕಹಳೆಯನ್ನು ಮೊಳಗಿಸಿ, ನೂರಾರು ಜನ ಆಹೂತಿಯಾಗಿರುವುದು ಇಂದಿಗೂ ರಾಷ್ಟ್ರ, ರಾಜ್ಯ ಹಾಗೂ ಬಾಗಲಕೋಟೆಯ ಇತಿಹಾಸದಲ್ಲಿ ನೆನಪಿಸಿಕೊಳ್ಳುವ ಸಂಗತಿಯಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು. 

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ 79ನೇ ಸ್ವಾಂತ್ರೋತ್ಸವದ ಧ್ವಜಾರೋಹಣ ನೆರವೆರಿಸಿ, ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದ ಅವರು ಜಡಗಣ್ಣ ಹಾಗೂ ಬಾಳಣ್ಣರ ಮುಂದಾಳತ್ವದಲ್ಲಿ 500 ಜನ ಸಂಘರ್ಷಕ್ಕೆ ಇಳಿದಿದ್ದರು. ಬ್ರಿಟೀಷ ಅಧಿಕಾರಿ ಕರ್ನಲ್ ಹಲಗಲಿ ಗ್ರಾಮಕ್ಕೆ ಬೆಂಕಿ ಹಚ್ಚಿ ಸುಟ್ಟ ಹಿನ್ನಲೆಯಲ್ಲಿ ನೂರಾರು ಜನ ಆಹೂತಿಯಾದರು. ಅನೇಕರನ್ನು ಮುಧೋಳ ಸಂತೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಜಮಖಂಡಿಯ ಬಂಡಾಯ, ಬದಾಮಿ ಬಂಡಾಯಗಳು ಸಹ ಸ್ವತಂತ್ರ್ಯ ಸಂಗ್ರಾಮದ ಹೋರಾಟದ ದಾಖಲೆಗಳಾಗಿವೆ ಎಂದು ತಿಳಿಸಿದರು. 

ಶಕ್ತಿ ಯೋಜನೆ ಯಶಸ್ಸು ಕಂಡಿದ್ದು, 500 ಕೋಟಿ ಪ್ರಯಾಣಿಕರ ಸಂಭ್ರಮಾಚರಣೆಯನ್ನು ಜಿಲ್ಲೆಯಾದ್ಯಂತ ಆಚರಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 2 ಲಕ್ಷದಿಂದ 3 ಲಕ್ಷದವರೆಗೆ ಸರಾಸರಿ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ನೇರ ನಗದು ವರ್ಗಾವಣೆ ಬದಲಾಗಿ ಒಟ್ಟು 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ 4.24 ಲಕ್ಷ ಜನ ಪ್ರಯೋಜನ ಪಡೆದರೆ, ಗೃಹ ಜ್ಯೋತಿ ಯೋಜನೆಯಡಿ 4.24 ಲಕ್ಷ, ಯುವನಿಧಿ ಯೋಜನೆಯಿಂದ  13,345 ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. 

ಕಂದಾಯ ಇಲಾಖೆಯಿಂದ ಜಿಲ್ಲೆಯ 10,392 ಫಲಾನುಭವಿಗಳು ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಸ್ವಚ್ಚಸರ್ವೆಕ್ಷಣಾ ಸಮೀಕ್ಷೆ-2024ರ ವರದಿಯಲ್ಲಿ ರಾಜ್ಯದ ನಗರಸಭೆಗಳಲ್ಲಿ ಬಾಗಲಕೋಟೆ ನಗರಸಭೆ 2ನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮುಧೋಳ ನಗರದಲ್ಲಿರುವ ದತ್ತ ಕೆರೆ ಅಭಿವೃದ್ದಿಪಡಿಸಲಾಗುತ್ತಿದೆ. ನವನಗರದ ಸೆಕ್ಟರ ನಂ.7ರಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಮೆಟ್ರಿಕ್ ನಂತರದ ಇಂಜೀನೀಯರಿಂಗ್ ಮತ್ತು ಮೆಡಿಕಲ್ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೆರಿಸಲಾಗಿದೆ ಎಂದು ತಿಳಿಸಿದರು. 

ಮುಚಖಂಡಿ ಕೆರೆ ಸುತ್ತ ಮತ್ತಲಿನ ಪ್ರದೇಶದಲ್ಲಿ 3 ಸಾವಿರ ಎತ್ತರದ ಸಸಿಗಳನ್ನು ನೆಟ್ಟು ನೆಡುತೋಪು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ. ಮಹಿಳಾ ಸ್ವಸಹಾಯ ಸಂಘಗಳಿಂದ ಎನ್‌.ಆರ್‌.ಎಲ್‌.ಎಂ ಯೋಜನೆಯಡಿ ಬಾಗಲಕೋಟೆ, ಬೀಳಗಿಯ ಹಾಗೂ ಇಲಕಲ್ಲ ತಾಲೂಕಿನಲ್ಲಿ ಸಂಜೀವಿನಿ ಸೂಪರ ಮಾರ್ಕೇಟ್‌ಗಳನ್ನು ತೆರೆಯಲಾಗುತ್ತಿದೆ. ವನಧನ ವಿಕಾಸ ಯೋಜನೆಯಡಿ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ, ಬಾದಾಮಿಯ ಆಡಗಲ್‌ನಲ್ಲಿ ಶೇಂಗಾ ಚಿಕ್ಕಿ ತಯಾರಿಕೆ, ಮುಧೋಳದ ಹಲಗಲಿಯಲ್ಲಿ ಬಿಸ್ಕತ್ ತಯಾರಿಕೆಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. 

ಮನೆ ಮನೆ ಗಂಗೆ ಎಂಬ ಯೋಜನೆಯ ಮೂಲಕ 3.33 ಲಕ್ಷ ಮನೆಗಳಿಗೆ ಪ್ರತಿ ದಿನ  ತಲಾವಾರು  55 ಲೀಟರ್ ಶುದ್ದ ನೀರು ಪೂರೈಸುವ ಗುರಿಯನ್ನು ಹೊಂದಲಾಗಿದ್ದು, ಇಲ್ಲಿವರೆಗೆ 2.97 ಲಕ್ಷ ಮನೆಗಳಿಗೆ ನಳಗಳ ಸಂಪರ್ಕ ಒದಗಸಲಾಗಿದೆ. ಮುಧೋಳದಲ್ಲಿ ರನ್ನ ಉತ್ಸವ, ಕೂಡಲಸಂಗಮದಲ್ಲಿ ಅನುಭವ ಮಂಟಪ ಬಸವಾದಿ ಶರಣ ವೈಭವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರವಾಸೋದ್ಯಮ ಉತ್ತೇಜನೆಗಾಗಿ ರೂ.166.22 ಕೋಟಿ ಅಂದಾಜು ಮೊತ್ತದಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸ್ಥಳಗಳನ್ನು ಒಳಗೊಂಡಿರುವ ಉತ್ತರ ಕರ್ನಾಟಕ ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗಲಕೋಟೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್‌.ವಾಯ್‌.ಮೇಟಿ ವಹಿಸಿದ್ದರು. ವೇದಿಕೆಯ ಮೇಲೆ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್‌.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಓ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಸಾಧನೆಗೈದ ಮಹನೀಯರಿಗೆ ಸನ್ಮಾನ  

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನಿಯರನ್ನು ಸನ್ಮಾನಿಸಲಾಯಿತು. ವೆಂಕಪ್ಪ ಸುಗತೇಕರ (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ) ಡಾ.ವೈಶಾಲಿ ಶೇಕರ ಮಾನೆ (ವೈದ್ಯಕೀಯ), ಚಾಮುಂಡೇಶ್ವರಿ ಸ್ವ-ಸಹಾಯ ಸಂಘ, ಕಟಗೇರಿ (ಸ್ವ-ಸಹಾಯ ಸಂಘ), ಸಿದ್ದು ಬಾ ಪಾಂಡು ಮಾಡಿಕ, ಮಹಾದೇವಿ ಬಾಲಪ್ಪ ಶಿರಬೂರ (ಕೃಷಿ), ಲಕ್ಷ್ಮಣ ಕಕ್ಕನವರ (ಕೈಮಗ್ಗ), ವೆಂಕಟೇಶ ಎಚ್‌. ಮುಖೆ (ಸಮಾಜಸೇವೆ),  ಶಿವಾಣಿ ನಿಂಬರಗಿ, ಬಸವರಾಜ ಹೊರಡ್ಡಿ (ಕ್ರೀಡೆ), ಬಸವರಾಜ ಸಿಂದಗಿಮಠ (ಸಂಗೀತ), ರಾಜಮಹಮ್ಮದ ಹುಸೇನಸಾಬ ಮದರಿ (ಪ್ರಾಣಿ ಸಂರಕ್ಷಣೆ), ಶಂಕ್ರಮ್ಮ ಎಸ್‌. ಬೆಣ್ಣೂರ (ಸಮಾಜ ಸೇವೆ), ಸಂಗಪ್ಪ ಲಕ್ಕಪ್ಪ ಗೆಣ್ಣೂರ (ರಂಗಭೂಮಿ), ಅಭಿಷೇಕ ಪಾಟೇಲ, ಮುಜಫರ ಎನ್‌. ಶಾಲಗಾರ (ಮಾದ್ಯಮ ಕ್ಷೇತ್ರ), ಆನಂದಪ್ಪ ಗಾವರವಾಡ (ಕ್ಯಾಮರಾಮನ್‌-ವಿದ್ಯುನ್ಮಾನ), ವಿಶ್ವಶ್ರೀ ರಮೇಶ ಡೊಂಬರ, ಕು. ಭವಾನಿ ಕಾಡಪ್ಪ ನಿಂಬರಗಿ, ಮಿನಾಜ್ ಮೆಹಬೂಬಸಾಬ ಕುರುಡಗಿ (ಶಿಕ್ಷಣ ಕ್ಷೇತ್ರ), ಗಿರಿಮಲ್ಲಪ್ಪ ಹನಮಂತಪ್ಪ ಪೂಜಾರಿ (ಚಿತ್ರಕಲೆ), ಪ್ರಜ್ವಲ್ ಸುಬ್ಬಣ್ಣ ರಾಠೋಡ (ಕ್ರೀಡೆ), ಶಿವಾನಂದ ಕಾಳಿಂಗಪ್ಪ ಪೂಜಾರಿ (ಶಿಕ್ಷಣ ಕ್ಷೇತ್ರ). 

ಹುತಾತ್ಮ ಯೋಧರ ಅವಲಂಬಿತರಿಗೆ ಸನ್ಮಾನ 

ಯುದ್ದ, ಯುದ್ದದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರಯೋಧರ ಅವಲಂಬಿತರನ್ನು ಸನ್ಮಾನಿಸಲಾಯಿತು. ಸುನಂದ ಗೋಲಂಡೆ, ಮಾಯಾದೇವಿ ಪೋತುರಾಜ, ಲಕ್ಷ್ಮೀಬಾಯಿ ಜಾದವ ಹಾಗೂ ಕೌಸರಬಾನು.