ಕಾರ್ನಿಯಾ ಚಿಕಿತ್ಸೆ, ನೇತ್ರದಾನದ ಕುರಿತು ಜಾಗೃತಿ

ಕಾರ್ನಿಯಾ ಚಿಕಿತ್ಸೆ, ನೇತ್ರದಾನದ ಕುರಿತು ಜಾಗೃತಿ  Awareness about corneal treatment and eye donation

ಲೋಕದರ್ಶನ ವರದಿ 

ಬೆಳಗಾವಿ 25 : ಕಾರ್ನಿಯಾ ಕಣ್ಣಿನ ಪಾರದರ್ಶಕ ಮುಂಭಾಗವಾಗಿದ್ದು, ಗಾಯ, ಅಪಘಾತ ಹಾಗೂ ಸೋಂಕಿನಿಂದ ಹಾನಿಗೊಳಗಾದರೆ ದೃಷ್ಟಿಗೆ ಗಂಭೀರ ಪರಿಣಾಮ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಆರಂಭಿಕ ಪತ್ತೆ, ತುರ್ತು ನಿರ್ವಹಣೆ ಹಾಗೂ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ ಉಪಕುಲಪತಿ ಡಾ. ಸಂದೀಪ್ ಶ್ರೀವಾಸ್ತವ ಹೇಳಿದರು. ನೇತ್ರದಾನ ಪಕ್ಷಾಚರಣೆಯ ಅಂಗವಾಗಿ ಕೆಎಲ್‌ಇ ಸಂಸ್ಥೆ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವಿವಿಧ ನೇತ್ರ ವೈದ್ಯಕೀಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ನಿಯಾ ಚಿಕಿತ್ಸೆಯ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನೇತ್ರದಾನದ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕಾರ್ಯಾಗಾರದಲ್ಲಿ ತಜ್ಞ ವೈದ್ಯರು ಉಪನ್ಯಾಸ ನೀಡಿದರು. ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಇದುವರೆಗೆ 125 ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಲಾಯಿತು.