ಲೋಕದರ್ಶನ ವರದಿ
ಲೇಖಕ ಜಿ.ಪ್ರಕಾಶರ ಕಾವ್ಯ ಕಂಪನ ಕವನ ಸಂಕಲನ ಲೋಕಾರೆ್ಣ
ಕಂಪ್ಲಿ 19: ಪಟ್ಟಣದ ಗಂಗಾಸಂಕೀರ್ಣದಲ್ಲಿ ಕಸಾಪ ತಾಲೂಕು ಮಟ್ಟದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಕಂಪ್ಲಿ ಕೋಟೆಯ ಲೇಖಕ ಜಿ.ಪ್ರಕಾಶ್ ಅವರ ‘ಕಾವ್ಯ ಕಂಪನ’ ಕವನ ಸಂಕಲನ ಲೋಕಾರ್ಣ ಸಮಾರಂಭ ಇತ್ತೀಚೆಗೆ ನಡೆಯಿತು.
ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕವಿ ಬದುಕಿನಲ್ಲಿ ತಾನು ಕಂಡುಂಡ ಸತ್ಯಗಳನ್ನು, ಸಮಾಜದ ಸಮಸ್ಯೆ, ಓರೆಕೋರೆಗಳನು, ಹದವಾದ ಅನುಭವಗಳನ್ನು ಹತ್ತಿರದಿಂದ ಕಂಡು ಕವಿತೆಯ ಸಾಲಿನಲ್ಲಿ ಹಿಡಿದಿಡುವುದು ಕವಿಯ ಹಿರಿಮೆಗೆ ಸಾಕ್ಷಿಯಾಗಿದೆ. ಸಾಹಿತ್ಯ ಅಭಿರುಚಿಯಿಂದ ಬದಲಾವಣೆ ಸಾಧ್ಯ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಕೃತಿ ಪರಿಚಯಿಸಿ ಮಾತನಾಡಿ, ಕವಿ ಪ್ರಕಾಶರ ಕಾವ್ಯ ಕಂಪನದ ಕವಿತೆಗಳು ಪ್ರಾಸ, ಛಂದಸ್ಸು ಮೊದಲಾದ ನಿಯಮಗಳಿಂದ ಅತೀತವಾಗಿ, ಯಾವುದೇ ಬಂಧಗಳಿಗೆ ಸಿಲುಕದೆ ನಿರಾಭರಣ ಅಲಂಕೃತವಾಗಿ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತಿವೆ. ವೈಯಕ್ತಿಕ ಮತ್ತು ಸಮುದಾಯದ ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿವೆ. ಸಂಕಲನದಲ್ಲಿ ಕವಿತೆ, ನೀಳ್ಗವಿತೆ, ಚುಟುಕು, ಆಧುನಿಕ ವಚನಗಳಿದ್ದು ಸಮಾಜ ಸುಧಾರಣೆಗೆ ಚಿಕಿತ್ಸಾ ರೂಪದಲ್ಲಿವೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪಿ.ಬಾಲಾಜಿ ಮಾತನಾಡಿ, ಕರೊನಾ ದಿನಗಳಲ್ಲಿ ಸಾಹಿತ್ಯವೇ ಹಲವರ ಸೃಜನಶೀಲ ವ್ಯಕ್ತಿತ್ವ ಹೆಚ್ಚಿಸಲು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದ ಸಾಹಿತ್ಯ ಭಾವರಹಿತವಾಗಿದೆ.
ಮಕ್ಕಳು ಮೊಬೈಲ್ ಮಂಪರಿನಲ್ಲಿದ್ದು ಸಂವೇಧನಾಶೀಲತೆ ಕಳೆದುಕೊಂಡಿದ್ದಾರೆ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಸಾಹಿತ್ಯದ ಅಭಿರುಚಿ ಪ್ರೇರೇಪಿಸಬೇಕಿದೆ ಎಂದರು. ಕಸಾಪ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆವಹಿಸಿದ್ದರು. ಲೇಖಕ ಜಿ.ಪ್ರಕಾಶ್, ಎಸ್.ರಾಮಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ಬಿ.ರಮೇಶ್,ಎಸ್.ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ವೀರಮ್ಮ ನಾಗರಾಜ, ಚಂದ್ರಯ್ಯ ಸೊಪ್ಪಿಮಠ, ಎಸ್.ಡಿ.ಬಸವರಾಜ, ಡಾ.ಸುನೀಲ್, ಬಡಿಗೇರ್ ಜಿಲಾನ್ಸಾಬ್, ಮುದುಕಪ್ಪ ನೆಲಜೇರಿ, ಸಂತೋಷ್ ಸೋಗಿ, ಎಸ್.ವಿಜಯಲಕ್ಷ್ಮಿ ಸೇರಿ ಇತರರಿದ್ದರು.