ಅಥಣಿ 09: ಗ್ರಾಮೀಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕ ಸಸಿ ನೆಡುವ ಹಾಗೂ ವಿದ್ಯುತ್ ಪೋಲಗಳನ್ನು ಹಾಕುವ ಮೊದಲು ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಅಧಿಕಾರಿಗಳು ಕಡ್ಡಾಯವಾಗಿ ಲೋಕೋಪಯೋಗಿ, ಪಂಚಾಯತ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಮುಖ್ಯಸ್ಥರೊಂದಿಗೆ ರಸ್ತೆ ಅಗಲೀಕರಣ ವ್ಯಾಪ್ತಿಯ ಕುರಿತು ಚರ್ಚಿಸಿ ಎಂದು ಶಾಸಕ ಲಕ್ಷ್ಮಣ ಸವದಿ ಆದೇಶಿಸಿದರು.
ಅವರು ಅಥಣಿ ತಾಲೂಕಾ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಪಕ್ಕದಲ್ಲಿಯೇ ಸಸಿ ನೆಡುವುದರಿಂದ ಮುಂದಾಗುವ ರಸ್ತೆ ಅಗಲೀಕರಣದಲ್ಲಿ ಮರ-ಗಿಡಗಳನ್ನು ಮತ್ತು ವಿದ್ಯುತ್ತ ಪೋಲಗಳನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಗುತ್ತದೆ ಹೀಗಾಗಿ ಸರಕಾರದ ಹಣ ಪೋಲಾಗುತ್ತಿದ್ದು, ಇದನ್ನು ತಪ್ಪಿಸಲು ಈ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಮಾಡಿಕೊಂಡು ಸಸಿ ನೆಡಬೇಕು ಮತ್ತು ಪೋಲಗಳನ್ನು ಹಾಕಬೇಕು ಎಂದರು.
ತಾಲೂಕಿನ ಎಲ್ಲ ಖಾಸಗಿ ಮತ್ತು ಸರಕಾರಿ ಪ್ರೌಢ ಶಾಲೆಗಳಲ್ಲಿ ಹಾಗೂ ಪಿ.ಯು ಕಾಲೇಜುಗಳ ಮೈದಾನಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪ್ರತಿ ವಿದ್ಯಾರ್ಥಿಗೆ ಒಂದರಂತೆ ದತ್ತು ನೀಡಿ ಅವುಗಳ ಪೋಷಣೆ ಜವಾಬ್ದಾರಿ ವಿದ್ಯಾಥಿಗಳಿಗೆ ಒಪ್ಪಿಸಿ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮನ್ವಯ ಮಾಡಿಕೊಳ್ಳಿ ಎಂದರು.
ಬಡ ಜನರಿಗಾಗಿ ಸರಕಾರ ಬಿಪಿಎಲ್ ಕಾರ್ಡಗಳ ಮೂಲಕ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿದೆ ಆದರೆ ಇಲ್ಲಿ ಯಾರದೋ ತಪ್ಪಿಗೋ ಅಥವಾ ಕಣ್ಣು ತಪ್ಪಿಯೋ ಅಕ್ಕಿ ಅಕ್ರಮವಾಗಿ ಹೊರಗೆ ಮಾರಾಟವಾಗುತ್ತಿರುವ ಬಗೆಗೆ ದೂರು ಬಂದಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ತಕ್ಷಣ ಅಂತಹ ಅಕ್ರಮ ಸಾಗಾಟವನ್ನು ತಡೆಯಬೇಕು ಮತ್ತು ಅಕ್ರಮ ಸಾಗಾಟಗಾರರ ಮೇಲೆ ಪೊಲೀಸಗ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಈ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿರುವ ಒಟ್ಟು ಜಾನುವಾರುಗಳ ಸಂಖ್ಯೆ ಎಷ್ಟು ಎಂದು ಶಾಸಕ ಲಕ್ಷ್ಮಣ ಸವದಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದಾಗ ಇಲಾಖೆ ಅಧಿಕಾರಿ ರಾಜ್ಯದಲ್ಲಿ ಜಾನುವಾರುಗಳ ಗಣತಿ ಪೂರ್ಣಗೊಂಡಿದೆ ಎಂದು ಉತ್ತರಿಸಿದಾಗ ಶಾಸಕರು ಅಕ್ಮಬರ್ - ಬೀರಬಲ್ ಕಥೆ ಹೇಳಿ ಸಭೆಯಲ್ಲಿ ನಗೆ ಬುಗ್ಗೆ ಎಬ್ಬಿಸಿದರು. ಈ ಭೂಮಿಯ ಕೇಂದ್ರ ಎಲ್ಲಿದೆ ? ಎಂದು ಅಕ್ಬರ್ ಬೀರಬಲ್ಗೆ ಪ್ರಶ್ನಿಸಿದಾಗ ತಕ್ಷಣ ಬೀರಬಲ್ ಚಾಣಾಕ್ಷತನದಿಂದ ನೀವು ಕೂತಿರುವ ಸಿಂಹಾಸನದ ಕೆಳಗಿದೆ ಎಂದು ತಕ್ಷಣ ಉತ್ತರಿಸಿದ ಮತ್ತು ಈಗಲೇ ಭೂಮಿಯನ್ನು ಅಳಸಿ ಅದರ ಕೇಂದ್ರ ಇಲ್ಲಿಯೇ ಬರುತ್ತದೆ ಎಂದು ಹೇಳಿದಂತೆ ನಿಮ್ಮ ಇಲಾಖೆಯ ಮಾಹಿತಿ ಬೀರಬಲ್ ಹೇಳಿದಂತೆ ಹೇಳಬೇಡಿ ಎಂದು ಕಿವಿ ಮಾತು ಹೇಳಿದರು.
ಮಹಾಪುರಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಯವರು ಕಂದಾಯ ಇಲಾಖೆಯೊಂದಿಗೆ ಸಂಪರ್ಕದಲ್ಲಿರಿ ಮತ್ತು ಮುನ್ನೆಚ್ಚರಿಕೆಯಾಗಿ ಕೆಲ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಲಕ್ಷ್ಮಣ ಸವದಿ ಸೂಚಿಸಿದರು. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಶಿಬಿರವನ್ನು ಸ್ಥಳೀಯ ಯೋಗ ಪಟುಗಳ ಸಹಯೋಗದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸುವ ಗುರಿ ಇದೆ ಇದಕ್ಕಾಗಿ ಎಲ್ಲರೂ ಸಹಕಾರ ಕೊಡಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ ಸಿದರಾಯ ಭೋಸಗೆ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿ. ವೈ ಎಸ್.ಪಿ ಪ್ರಶಾಂತ ಮುನ್ನೋಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮೀತಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ವಿವಿಧ ಇಲಾಖೆಗಳ ವೀರಣ್ಣಾ ವಾಲಿ, ರವೀಂದ್ರ ಮೂರ್ಗಾಲಿ, ಪ್ರವೀಣ ಪಾಟೀಲ, ವೆಂಕಟೇಶ ಕುಲಕರ್ಣಿ, ಜಯಾನಂದ ಹಿರೇಮಠ, ನೀರಾವರಿ ಇಲಾಖೆಯ ಪ್ರವೀಣ ಹುಣಸಿಕಟ್ಟಿ, ಮಂಜುನಾಥ ಸೌಂದಲಗೇಕರ, ಅಶೋಕ ಗುಡಿಮನಿ, ಎಮ್.ಎಸ್.ಶಿರಾಳೆ, ಶ್ರೀರಂಗ ಜೋಶಿ, ಪ್ರಶಾಂತ ಗೌರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.