ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಮನವಿ Appeal of mid day meal employees demanding fulfillment of various demands

ಜಮಖಂಡಿ 10: ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘಟನೆಯಿಂದ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ನಗರದ ಎ.ಜಿ. ದೇಸಾಯಿ ಸರ್ಕಲ್‌ದಿಂದ ತಾಲೂಕಾಡಳಿತ ಸೌಧದವರಗೆ ಪಾದಯಾತ್ರೆ ನಡೆಸಿ. ನಂತರ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲಿಸಿದರು. 

ನಂತರ ಮಾತನಾಡಿದ ಅವರು, ಮೊದಲಿಗೆ ಮಧ್ಯಾಹ್ನ ಅನ್ನ-ಸಾರು ಮಾತ್ರವಿತ್ತು. ಈಗ ನೂರಾರು ಮಕ್ಕಳಿಗೆ ಮೊಟ್ಟೆ ಬೇಯಿಸಿ. ಸುಲಿದ್ದು ಕೊಡಬೇಕು ಮಾತ್ರವಲ್ಲದೇ ಕೆಲವಡೆ ಚಪಾತಿ, ದೋಸೆ, ಹೋಳಿಗೆ ಮಾಡಿಸುವ ಪದ್ಧತಿಯಿದೆ. ರಾಗಿ ಮಾಲ್ಟ್‌, ಹಾಲು, ಶಾಲಾ ಸ್ವಚ್ಛತೆ ಮಾಡುವುದು ಹೀಗೆ ತಮ್ಮ ಕೆಲಸದ ಜೊತೆ ಇತರೆ ಪ್ರತಿನಿತ್ಯ ಒತ್ತಡ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರವು 2013 ರಿಂದ ವೇತನವನ್ನು ಹೆಚ್ಚಳ ಮಾಡಿರುವುದಿಲ್ಲ. ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳಾಗಿದೆ. ಶಿಕ್ಷಣದ ಏಕಾಗ್ರತೆಗಾಗಿ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವ ದೃಷ್ಟಿಕೋನದಿಂದ ದುಡಿಯುವ ಬಿಸಿಯೂಟ ನೌಕರರನ್ನು ಖಾಯಂ ಮಾಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ಜಾರಿ ಮಾಡಬೇಕೆಂದು ಈಗಾಗಲೇ ಆದೇಶವಾಗಿದೆ. ಆದರೆ ಇದುವರೆಗೆ ಸಂಪೂರ್ಣವಾಗಿ ಜಾರಿ ಮಾಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಎಮ್‌.ಡಿ.ಎಮ್ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಬಿಸಿಯೂಟ ನೌಕರರಿಗೆ 26 ಸಾವಿರ ಕನಿಷ್ಟ ವೇತನ ಹಾಗೂ ಮಾಸಿಕ ಪಿಂಚಣಿ 10 ಸಾವಿರ ಕೊಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ತಕ್ಷಣ ಜಾರಿ ಮಾಡಬೇಕು. ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಮ್‌ಸಿ ಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸ್ಸಾಗಬೇಕು ಸಾದಿಲ್ವಾರು ಖಾತೆ ಮೊದಲಿನಂತೆಯೇ ಬದಲಾಯಿಸಬೇಕು. ಅಡುಗೆ ಕೇಂದ್ರಗಳು ಸುಸಜ್ಜಿತವಾಗಿ ಇಲ್ಲದ ಕಡೆ ಉತ್ತಮ ಆಡುಗೆ ಕೇಂದ್ರಗಳನ್ನು ನಿರ್ಮಿಸಬೇಕು. ಹಾಗೂ ಕ್ರಿಮಿ ಕೀಟಗಳು ಬರದ ರೀತಿಯಲ್ಲಿ ಅಡುಗೆ ಕೇಂದ್ರಗಳ ಸುತ್ತ ಮುತ್ತ ಸೂಕ್ತ ವಾತಾವರಣ ಸೃಷ್ಟಿಸಬೇಕು. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನಕ್ಕೆ ರೂ.600 ಕೂಲಿ ನಿಗದಿಪಡಿಸಬೇಕು. ನಗರ ಪ್ರದೇಶಕ್ಕೂ ವಿಸ್ತರಿಸಬೇಕು, ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ಎಲ್ಲರಿಗೂ ವಸತಿ ಖಾತ್ರಿಪಡಿಸಬೇಕೆಂದು ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.