ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಕೃಷಿ ಸಚಿವರ ಭೇಟಿ
ಲೋಕದರ್ಶನ ವರದಿ
ಮತ್ತಿಕೊಪ್ಪ 22: ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರು ಭೇಟಿ ನೀಡಿ, ಕೇಂದ್ರದ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಿದ ಒಂದು ಕಣ್ಣಿನ ಕಬ್ಬು ಸಸಿಗಳನ್ನು ತಯಾರಿಸುವ “ನೇಚರ್ ನರ್ಸರಿ” ಯನ್ನು ಉದ್ಘಾಟಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ. ಬಿ.ಆರ್. ಪಾಟೀಲ ರವರು ಸಚಿವರನ್ನು ಸ್ವಾಗತಿಸಿ ಕೇಂದ್ರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ, ಪ್ರಯೋಗಾಲಯ, ರೈತ ಭವನ ಹಾಗೂ ಬೀಜ ಘಟಕ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಕುರಿತು ವಿವರಿಸಿದರು. ವಿವಿಧ ಕಬ್ಬು ತಳಿಗಳ ಬೆಳವಣಿಗೆ ಹಾಗೂ ಇಳುವರಿ ಸಾಮರ್ಥ್ಯದ ಕುರಿತಾದ ಗುಣ ಲಕ್ಷಣಗಳ ಕುರಿತು ಮಾನ್ಯ ಸಚಿವರು ಮಾಹಿತಿ ಪಡೆದರು.
ಅದರಂತೆ ಹಿಂಗಾರು ಬೆಳೆಗಳಾದ ಗೋದಿ, ಕಡಲೆ, ಸೂರ್ಯಕಾಂತಿ, ಹಿಂಗಾರು ಜೋಳ, ಚೆನ್ನಂಗಿ ಕುಸುಬೆ ಹಾಗೂ ಚಿಯಾ ಬೆಳೆಗಳ ವಿವಿಧ ತಳಿಗಳ ಬೆಳೆ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿ ವಿಜ್ಞಾನಿಗಳಿಂದ ತಳಿಗಳ ಗುಣಲಕ್ಷಣಗಳನ್ನು ಅರಿತುಕೊಂಡರು. ಇದೇ ಸಂದರ್ಭದಲ್ಲಿ, ಜಿಲ್ಲೆಯ ಅರೆ ಕೃಷಿ ವಿಸ್ತರಣಾ ಕಾರ್ಯಕರ್ತೆಯರಾದ ಕೃಷಿ ಸಖಿಯರೊಂದಿಗೆ ಚರ್ಚಿಸಿ ಅವರ ಕಾರ್ಯ ವೈಖರಿಯ ಬಗ್ಗೆ ತಿಳಿದುಕೊಂಡರು. ಭೇಟಿ ನಂತರ ಮಾತನಾಡಿದ ಸಚಿವರು, ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ, ಇಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆ ಘಟಕಗಳು ರೈತರಿಗೆ ಮಾದರಿಯಾಗಿವೆ. ಈ ನಿಟ್ಟಿನಲ್ಲಿ ಕೇಂದ್ರದ ಸ್ಥಾಪನೆಗೆ ಆಸಕ್ತಿ ತೋರಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರನ್ನು ಅಭಿನಂದಿಸಿದರು ಹಾಗೂ ವಿಜ್ಞಾನಿಗಳ ಪ್ರಯತ್ನಕ್ಕೆ ಶುಭ ಕೋರಿದರು. ಕಬ್ಬು ಸಸಿ ತಯಾರಿಸುವ ನರ್ಸರಿಯು ಪ್ರಾರಂಭವಾದ ಎರಡು ತಿಂಗಳುಗಳಲ್ಲಿ ಕಬ್ಬು ಬೆಳೆಯ ವಿವಿಧ ತಳಿಗಳ ಒಂದು ಕಣ್ಣಿನ ಮೂರು ಲಕ್ಷ ಸಸಿಗಳನ್ನು ತಯಾರಿಸಿ ರೈತರಿಗೆ ಪೂರೈಸಿದ್ದು ಗಮನಾರ್ಹವಾಗಿದೆ.
ಭೇಟಿ ಸಂದರ್ಭದಲ್ಲಿ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಡಾ. ವ್ಹಿ. ಆಯ್. ಪಾಟೀಲ, ಕರ್ನಾಟಕ ಸರ್ಕಾರದ ಕೃಷಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ಡಾ. ಎ. ಬಿ. ಪಾಟೀಲ ಹಾಗೂ ಬೆಳಗಾವಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಹೆಚ್. ಡಿ. ಕೋಳೇಕರ, ಬೈಲಹೊಂಗಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೃಷಿ ಅಧಿಕಾರಿ ಆರ್. ಐ. ಕುಂಬಾರ, ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಹಾಗೂ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ ಕೇಂದ್ರದ ಚಟುವಟಿಕೆಗಳ ಕುರಿತು ಹಾಗೂ ರೈತರಿಗೆ ಒದಗಿಸುವ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 