ಪ್ರತಿ ಮಗುವಿಗೂ ಜಂತುನಿವಾರಕ ಮಾತ್ರೆ ನೀಡಿ

ಪ್ರತಿ ಮಗುವಿಗೂ ಜಂತುನಿವಾರಕ ಮಾತ್ರೆ ನೀಡಿ  Administer a deworming tablet to every child

ಇಂಡಿ 11 : ಜಂತುಹುಳು ಬಾಧೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ 1ರಿಂದ 19 ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಜಂತುನಿವಾರಕ ಮಾತ್ರೆ ನೀಡಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ ಮೇತ್ರಿ ಹೇಳಿದರು.  

ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಹಾಗೂ ಯುಬಿಎಸ್ ಶಾಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಹಾಗೂ ದೊಡ್ಡವರು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಮಲವಿಸರ್ಜನೆಯ ಬಳಿಕ ಮತ್ತು ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  

ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ರಾಮಗೊಂಡ ಭಜಂತ್ರಿ ಮಾತನಾಡಿ, ಪ್ರತಿ ಆರು ತಿಂಗಳಿಗೊಮ್ಮೆ ಜಂತುನಿವಾರಕ ಮಾತ್ರೆ ಸೇವಿಸುವಂತೆ ತಿಳಿಸಿದರು. ಜಂತುರಹಿತ ಮಗು ದೇಶದ ಸಂಪತ್ತು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.  ಕೆಬಿಎಸ್ ಮುಖ್ಯ ಶಿಕ್ಷಕ ಎಸ್‌.ಎಸ್‌. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು, ಆಶಾ ಕಾರ್ಯಕರ್ತೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.