ವ್ಯಸನ ಮತ್ತು ಒತ್ತಡ ನಿರ್ವಹಣೆ ಜಾಗೃತಿ ಕಾರ್ಯಕ್ರಮ

ವ್ಯಸನ ಮತ್ತು ಒತ್ತಡ ನಿರ್ವಹಣೆ ಜಾಗೃತಿ ಕಾರ್ಯಕ್ರಮ Addiction and Stress Management Awareness Program

ಲೋಕದರ್ಶನ ವರದಿ 

ಕಾಗವಾಡ 25: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ವ್ಯಸನದ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಮಹಾರಾಷ್ಟ್ರದ ಮಿರಜ್ ಪಟ್ಟಣದ ನಿರ್ಮಲ ಫೌಂಡೇಶನ್ ವತಿಯಿಂದ ಸಾವಂತವಾಡಿ ಪಟ್ಟಣದ ವಿದ್ಯಾವಿಕಾಸ ಅಧ್ಯಾಯಕ ವಿದ್ಯಾಲಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಇತ್ತಿಚಿಗೆ ಆಯೋಜಿಸಲಾಗಿತ್ತು. 

ನಿರ್ಮಲ್ ಫೌಂಡೇಶನ್‌ನ ಡಾ. ದೀಪಕ್ ಮುಕಾದಮ್ಮ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ವ್ಯಸನವು ವ್ಯಕ್ತಿಯ ಜೀವನವನ್ನು ಕ್ರಮೇಣ ಹೇಗೆ ನಿಯಂತ್ರಿಸುತ್ತದೆ. ಒತ್ತಡವು ನಮ್ಮ ಆರೋಗ್ಯದ ದಕ್ಷತೆಯನ್ನು ಹೇಗೆ ಕಡಿಮೆ ಮಾಡುತ್ತದೆ. ಹಾಗೂ ಸರಿಯಾದ ಮಾನಸಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎರಡೂ ಅಪಾಯಗಳನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಪರಿಣಾಮಕಾರಿಯಾಗಿ ಮಾರ್ಗದರ್ಶನ ಮಾಡಿದ ಅವರು, ಮೊಬೈಲ್ ವ್ಯಸನ, ಹೆಚ್ಚುತ್ತಿರುವ ಸ್ಕ್ರೀನ್ ಸಮಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ವ್ಯಸನ ಮುಕ್ತ ಸಮಾಜವನ್ನು ಸೃಷ್ಟಿಸಲು ಯುವಕರು ಮುಂದಾಗಬೇಕೆಂದು ಮನವಿ ಮಾಡಿದರು. 

ಈ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದರು.