ಬೆಳಗಾವಿಯಲ್ಲಿ ನಟಿ ಉಮಾಶ್ರೀ ಏಕಪಾತ್ರಾಭಿನಯ ನಾಟಕ

ಬೆಳಗಾವಿಯಲ್ಲಿ ನಟಿ ಉಮಾಶ್ರೀ ಏಕಪಾತ್ರಾಭಿನಯ ನಾಟಕ   Actress Umashree's one-act play in Belgaum

ಬೆಳಗಾವಿ 01: ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಜುಲೈ ದಿ. 1 ಮಂಗಳವಾರದಂದು ಮುಂ. 11 ಗಂಟೆಗೆ ಮಾಧ್ಯಮ ಗೋಷ್ಠಿಯನ್ನು ಕರೆದಿದ್ದರು. ಈ ಸಂದರ್ಭದಲ್ಲಿ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾಧ್ಯಮದವರೊಂದಿಗೆ ಮಾತನಾಡಿದರು. 

ಬೆಳಗಾವಿಯ ರಂಗಸಂಪದದವರು ಶ್ರೇಷ್ಠ ನಟಿ, ರಾಜಕಾರಣಿ ಉಮಾಶ್ರೀಯವರು ಅಭಿನಯಿಸಿರುವ ರಂಗಸಂಪದ ಬೆಂಗಳೂರಿನ ತಂಡದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ ಇದೇ ದಿ.5 ಶನಿವಾರದಂದು ಸಾಯಂಕಾಲ ಸರಿಯಾಗಿ 6-30 ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರೀಝ ಟಾಕೀಜ್)ದಲ್ಲಿ ಪ್ರದರ್ಶನಗೊಳ್ಳಲಿದೆ.   

ಮುಂದೆ ಮಾತನಾಡುತ್ತ ಡಾ. ಕುಲಕರ್ಣಿಯವರು ಸಾಕಷ್ಟು ಚಲನಚಿತ್ರಗಳಲ್ಲ ಅಭಿನಯಿಸಿ, ಮಂತ್ರಿ ಪಟ್ಟವನ್ನು ಅಲಂಕರಿಸಿ ಕರ್ನಾಟಕ ಜನರ ಮನವನ್ನು ಗೆದ್ದಿರುವ ಖ್ಯಾತ ಅಭಿನೇತ್ರಿ ಶ್ರೀಮತಿ ಉಮಾಶ್ರೀಯವರು ಶರ್ಮಿಷ್ಠೆ ಏಕವ್ಯಕ್ತಿ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ನಾಟಕ ಬೆಂಗಳೂರು ಮತ್ತು ಮೈಸೂರದಲ್ಲಿ ಪ್ರದರ್ಶನಗೊಂಡು ಕಲಾಸಕ್ತರ ಮನಸ್ಸನ್ನು ಗೆದ್ದಿದೆ. ಈ ನಾಟಕ ಅಲ್ಲದೇ ಉಮಾಶ್ರೀಯವರ ಅಭಿನಯ ಕುರಿತಂತೆ ಮಾಧ್ಯಮದವರು ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳೊಂದಿಗೆ ಹಾಡಿ ಹೊಗಳಿದ್ದಾರೆ.   

ಉಮಾಶ್ರೀಯವರು ಸುಮರು 40 ವರ್ಷಗಳ ಹಿಂದೆಯೇ ಅಂದರೆ ಚಲನಚಿತ್ರರಂಗ ಪ್ರವೇಶ ಮಾಡುವ ಮೊದಲೇ ರಂಗಸಂಪದದವರು ಹಮ್ಮಿಕೊಂಡಿದ್ದ 5 ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದರೆಂಬುದು ರಂಗಸಂಪದದವರಿಗೊಂದು ಅಭಿಮಾನದ ಸಂಗತಿ. ಮುಂದೆ ಇವರು ಚಿತ್ರರಂಗದ ಮೂಲಕ ಪ್ರಸಿದ್ಧರಾದರು. ಈಗ ಬಹಳ ವರ್ಷಗಳ ನಂತರ ರಂಗಸಂಪದ ತಂಡ ಹಮ್ಮಿಕೊಂಡಿರುವ ಶರ್ಮಿಷ್ಠೆ ನಾಟಕದಲ್ಲಿ ಕಾಣಿಸಿಕೊಳ್ಳುತ್ತಿರುವುದು ರಂಗಸಂಪದ ತಂಡಕ್ಕಷ್ಟೆ ಅಲ್ಲ ಬೆಳಗಾವಿ ರಂಗಪ್ರೇಮಿಗಳಿಗೆಲ್ಲ ಸಂಭ್ರಮವನ್ನುಂಟು ಮಾಡಿದೆ.  

ಮೂಲ ಮರಾಠಿಯ ವಿ.ಸ ಖಾಂಡೇಕರ ಅವರ ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಮ್‌.ಇನಾಮದಾರ ಅವರು ಅನುವಾದಿಸಿದ್ದಾರೆ. ಇದರ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗೀರೀಶ ಕಾರ್ನಾಡರ ಯಯಾತಿ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ಶರ್ಮಿಷ್ಠೆ. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾವಸ್ತು.   

ಈ ನಾಟಕದ ನಿರ್ದೇಶನ ಮತ್ತು ವಿನ್ಯಾಸ ಚಿದಂಬರರಾವ್ ಜಂಬೆಯವರದಾಗಿದ್ದು ನಾಟಕ ರೂಪಾಂತರ ಬೇಲೂರು ರಘುನಂದನ ಅವರದ್ದಾಗಿದೆ. ರಂಗಸಂಪದ ವಾರ್ಷಿಕ ಪ್ರೇಕ್ಷಕ ಸದಸ್ಯತ್ವವನ್ನು ಹೊಂದಿದವರಿಗೆ ಉಚಿತ ಪ್ರವೇಶವಿದ್ದು ಉಳಿದವರಿಗೆ ಸಹಾಯ ದೇಣಿಗೆ ಒಬ್ಬರಿಗೆ ರೂ.200 ಇರತ್ತದೆ. ದೇಣಿಗೆ ನೀಡಿ ಪ್ರವೇಶ ಪಡೆಯಲಿಚ್ಛಿಸುವವರು 9845025638 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದೆಂದು ಹೇಳಿದರು.   

ಮಾಧ್ಯಮ ಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಸಾದ ಕಾರಜೋಳ, ಖಜಾಂಚಿ ದೀಲೀಪ ಮಳಗಿ, ಉಪಾಧ್ಯಕ್ಷರಾದ ಗುರುನಾಥ ಕುಲಕರ್ಣಿ ರಾಮಚಂದ್ರ ಕಟ್ಟಿ ಸದಸ್ಯರಾದ ಚಿದಾನಂದ ವಾಳ್ಕೆ, ಅಶೋಕ ಕುಲಕರ್ಣಿ, ಬಸವರಾಜ ಹುಣಸಿಕಟ್ಟಿಯವರು ಉಪಸ್ಥಿತರಿದ್ದರು.