ಸಿಡಿಲು ಬಡಿದು ದಾಸರ ನಾಗೆನಹಳ್ಳಿ ಯುವಕ ಸಾವು

ಸಿಡಿಲು ಬಡಿದು ದಾಸರ ನಾಗೆನಹಳ್ಳಿ ಯುವಕ ಸಾವು A young man from Dasara Nagenahalli died after being struck by lightning

ಬಳ್ಳಾರಿ 16: ಜಿಲ್ಲೆಯ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸುರಿದ ಮಳೆಗೆ ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಗ್ರಾಮದ ಕೊರಿ ಗಾದಿಲಿಂಗಪ್ಪ (32) ಎಂದು ಗುರುತಿಸಲಾಗಿದೆ.ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಗ್ರಾಮದಲ್ಲಿ ಏಕಾಏಕಿ ಮಳೆ ಆರಂಭವಾಗಿತ್ತು. ಈ ವೇಳೆ ತಮ್ಮ ಹೊಲದಲ್ಲಿರುವ ಸಪೋಟ ಹಣ್ಣು ಹರಿಯಲು ಗಾದಿಲಿಂಗಪ್ಪ ತೆರಳಿದ್ದರು. ಮಳೆಯ ನಡುವೆಯೇ ಸಿಡಿಲು ಬಡಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತ ಗಾದಿಲಿಂಗಪ್ಪ ದಾಸರ ನಾಗೇನಹಳ್ಳಿ ಗ್ರಾಮದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ನಿತ್ಯ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು.

ಅವರ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ಗಾದಿಲಿಂಗಪ್ಪ ಅವರಿಗೆ ಪತ್ನಿ ಮಂಜಮ್ಮ, ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದ್ದಾರೆ. ಮೃತರ ತಂದೆ ಮಲ್ಲೇಶ್ ಎಂದು ತಿಳಿದು ಬಂದಿದೆ.ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಳೆಗಾಲ ಆರಂಭವಾಗುತ್ತಿದ್ದಂತೆ ಸಿಡಿಲಿನ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.ಈ ಘಟನೆ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.