ಆತ್ಮನಿರ್ಭರ ಭಾರತದತ್ತ ಹೆಜ್ಜೆ: ದೇವಲಾಪುರದಲ್ಲಿ ಸೋಯಾಬೀನ್ ಕ್ಷೇತ್ರೋತ್ಸವ ಹಾಗೂ ಬೀಜ ಕಿಟ್ ವಿತರಣೆ

ಆತ್ಮನಿರ್ಭರ ಭಾರತದತ್ತ ಹೆಜ್ಜೆ: ದೇವಲಾಪುರದಲ್ಲಿ ಸೋಯಾಬೀನ್ ಕ್ಷೇತ್ರೋತ್ಸವ ಹಾಗೂ ಬೀಜ ಕಿಟ್ ವಿತರಣೆ A step towards self-reliant India: Soybean field festival and seed kit distribution in Devalapur

ಲೋಕದರ್ಶನ ವರದಿ 

ನೇಸರಗಿ 12 : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಕೃಷಿ ಇಲಾಖೆ, ಬೆಳಗಾವಿ ಹಾಗೂ ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸೋಯಾಬೀನ್ ಕ್ಷೇತ್ರೋತ್ಸವ ಮತ್ತು ಉಚಿತ ಬಿತ್ತನೆ ಬೀಜದ ಕಿಟ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀ ಹೆಚ್‌. ಡಿ. ಕೋಳೇಕರ ಅವರು, ರೈತರು ಗುಣಮಟ್ಟದ ಬೀಜ ಬಳಕೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಧಿಕ ಉತ್ಪಾದನೆ ಸಾಧಿಸಿ, ಕೃಷಿಯಲ್ಲಿ ಸ್ವಾವಲಂಬನೆ ಹೊಂದಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದೇವಲಾಪುರ ಗ್ರಾಮದ ಪ್ರಗತಿಪರ ರೈತರಿಗೆ ಉನ್ನತ ಗುಣಮಟ್ಟದ ಸೋಯಾಬೀನ್ ಬಿತ್ತನೆ ಬೀಜದ ಕಿಟ್‌ಗಳನ್ನು ವಿತರಿಸಲಾಯಿತು. ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಅವರು ಮಾತನಾಡಿ, ಆಧುನಿಕ ಕೃಷಿ ತಂತ್ರಜ್ಞಾನಗಳು, ಗುಣಮಟ್ಟದ ಬೀಜಗಳು ಹಾಗೂ ಸಮಗ್ರ ಬೆಳೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರು ಹೆಚ್ಚಿನ ಇಳುವರಿ ಹಾಗೂ ಆದಾಯ ಗಳಿಸಬಹುದೆಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ನಿರಂತರವಾಗಿ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿಗಳನ್ನು ನೀಡುತ್ತಿದ್ದು, ರೈತರ ಆದಾಯ ವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ದೇವಲಾಪುರ ಗ್ರಾಮದ ಸೋಯಾಬೀನ್ ಕ್ಷೇತ್ರಕ್ಕೆ ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಭೇಟಿ ನೀಡಿ ಬೆಳೆ ಪರೀಶೀಲನೆ ನಡೆಸಿದರು.