ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ಹುನ್ನಾರ:ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿ

ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ಹುನ್ನಾರ:ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿ A clean chit is being given to the state government: MLA Dr. Shailendra Beldale opposed

ಬೀದರ್ 19; ಆರ್ ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರ ಸಾವು ಹಾಗೂ 71 ಮಂದಿ ಗಾಯಗೊಂಡಿರುವ  ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಆದರೆ ಈ ಕುರಿತು ತನಿಖೆ ನಡೆಸಿರುವ ನ್ಯಾ.ಮೈಕಲ್ ಕುನ್ಹಾ ನೇತೃತ್ವದ ಸಮಿತಿಯು ರಾಜ್ಯ ಸರ್ಕಾರಕ್ಕೆ  ಈ ಪ್ರಕರಣದಿಂದ ಬಚಾವ್ ಮಾಡಿ ಕ್ಲೀನ್ ಚಿಟ್ ನೀಡಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ. 

ಕುನ್ಹಾ ಸಮಿತಿ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕಾಲ್ತುಳಿತ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ತಪ್ಪೇ ಇಲ್ಲ ಎಂದು ಸಾಬೀತುಪಡಿಸುವಂತಿರುವ ಈ ವರದಿ ಅಕ್ಷರಶಃ ಸರ್ಕಾರವೇ ಬರೆಸಿರುವ ವರದಿ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಜನರ ಜೀವಕ್ಕೂ ಬೆಲೆ ಕೊಡದಂತಹ  ಈ ವರದಿಯನ್ನು ಕನ್ನಡಿಗರು  ಒಪ್ಪುವುದಿಲ್ಲ.  ಸರ್ಕಾರಕ್ಕೆ ಅಮಾಯಕರ ಸಾವು, ಕುಟುಂಬದವರ ನೋವಿನ ಶಾಪ ತಟ್ಟಲಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಕಾಲ್ತುಳಿತ ಘಟನೆಗೆ ಆರ್ ಸಿಬಿ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ( ಕೆಎಸ್ ಸಿಎ), ಡಿಎನ್ ಎ ಸಂಸ್ಥೆ ಹಾಗೂ  ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಏಕಪಕ್ಷೀಯವಾಗಿ ಟಾರ್ಗೆಟ್ ಮಾಡಲಾಗಿದೆ. ಕಾರ್ಯಕ್ರಮ ಆಯೋಜನೆ ಮುನ್ನ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ, ಪೂರ್ವಭಾವಿ ತಯಾರಿ ಮಾಡಿಕೊಂಡಿಲ್ಲ. ಇದನ್ನು ಏಕೆ ವರದಿಯಲ್ಲಿ ಉಲ್ಲೇಖಿಸಿಲ್ಲ? ಸ್ವತಃ ಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಕಾರ್ಯಕ್ರಮ ಬಗ್ಗೆ ಪೋಸ್ಟ್‌ ಮಾಡಿರುವುದು, ಹಿರಿಯ ಅಧಿಕಾರಿಗಳು ವಿಧಾನಸೌಧ ಮುಂಭಾಗ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸಮಿತಿ ಗಮನಕ್ಕೆ ಬಂದಿಲ್ಲವೆ? ಎಂದು ಪ್ರಶ್ನಿಸಿರುವ ಬೆಲ್ದಾಳೆ ಅವರು, ಎಲ್ಲ ಮಗ್ಗುಲಗಳಿಂದಲೂ ಇಲ್ಲಿ ಸರ್ಕಾರಕ್ಕೆ ರಕ್ಷಣೆ ಮಾಡುವ ಕೆಲಸ ಮಾಡಲಾಗಿದೆ. ಇದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ. 

ಲಕ್ಷಾಂತರ ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಬೇಕಾದರೆ ಕಾನೂನಿನ ಪ್ರಕಾರ ಒಂದು ವಾರ ಮುಂಚಿತವೇ ನಿರ್ಧಾರ ಕೈಗೊಂಡು ಸೂಕ್ತ ಸಿದ್ಧತೆಗಳು ಮಾಡಿಕೊಳ್ಳಬೇಕು ಎಂದು ಕುನ್ಹಾ ಅವರು ವರದಿಯಲ್ಲಿ ಹೇಳಿದ್ದಾರೆ. ಆದರೆ ಆತುರಾತುರದಲ್ಲಿ ವಿಧಾನಸೌಧ ಎದುರು ಕಾರ್ಯಕ್ರಮ ಸಂಘಟಿಸಿ ಸರ್ಕಾರ ದೊಡ್ಡ ತಪ್ಪುಮಾಡಿದೆ. ಇದಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರು ಹೊಣೆ ಎಂದು ಏಕೆ ನಮೂದಿಸಿಲ್ಲ. ಸರ್ಕಾರ ಈ ವರದಿ ಮುಖಾಂತರ ತನ್ನ ತಪ್ಪುಗಳನ್ನು ಇತರರ ಮೇಲೆ ಹಾಕಿ ತಾನು ಜವಾಬ್ದಾರಿಯಿಂದ ಜಾರಿಕೊಳ್ಳುವ ಕೆಲಸ ಮಾಡಿದೆ ಎಂದು ದೂರಿದ್ದಾರೆ. 

ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಆರ್ ಸಿಬಿ, ಕೆಎಸ್ ಸಿಎ, ಡಿಎನ್ ಎ ಸಂಸ್ಥೆ ಜೊತೆಗೆ ಕೆಲವು ಅಧಿಕಾರಿಗಳು ಮಾತ್ರ ಕಾರಣರು ಎಂದು ನ್ಯಾ.ಕುನ್ಹಾ ಸಮಿತಿ ವರದಿ ಹೇಳಿರುವುದು ಸಮರ್ಥನೀಯವಲ್ಲ. ರಾಜ್ಯ ಸರ್ಕಾರದ ಪರವಾಗಿರುವ  ಏಕಪಕ್ಷೀಯ ವರದಿ ಇದಾಗಿದೆ. 

ತನ್ನ ಬೆನ್ನು ತಟ್ಟಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಪ್ರೇರಿತ ಈ ವರದಿ ಸ್ವೀಕಾರಕ್ಕೆ ಯೋಗ್ಯವಲ್ಲ. ಈ ವರದಿ ಕೈಬಿಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. 

-ಡಾ.ಶೈಲೇಂದ್ರ ಬೆಲ್ದಾಳೆ 

ಬೀದರ್ ದಕ್ಷಿಣ ಶಾಸಕರು ಹಾಗೂ 

ಬಿಜೆಪಿ ರಾಜ್ಯ ಕಾರ್ಯದರ್ಶಿ