ಮಲ್ಲಿಕಾರ್ಜುನ ಮಹಾವಿದ್ಯಾಲಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಮಲ್ಲಿಕಾರ್ಜುನ ಮಹಾವಿದ್ಯಾಲಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ  80th Independence Day celebration on the premises of Mallikarjuna Mahavidyalaya

ಲೋಕದರ್ಶನ ವರದಿ 

ಕಾಗವಾಡ 16 : ಪಟ್ಟಣದ ಮಲ್ಲಿಕಾರ್ಜುನ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ, ಆ. 15ರಂದು ತಾಲೂಕು ಮಟ್ಟದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ರವೀಂದ್ರ ಹಾದಿಮನಿ, “ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರ ಆಡಳಿತದಿಂದ ಮುಕ್ತಿ ಮಾತ್ರವಲ್ಲ. ‘ನಾನು ದೇಶಕ್ಕಾಗಿ ಏನು ಮಾಡಿದೆ?’ ಎಂಬ ಪ್ರಶ್ನೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಮೂಡಿದಾಗ ಮಾತ್ರ ಭಾರತದ ಭವಿಷ್ಯ ಬದಲಾಗುತ್ತದೆ” ಎಂದು ಹೇಳಿದರು.  

ನಮ್ಮ ದೇಶವು ಕೇವಲ ಅಭಿವೃದ್ಧಿ ಹೊಂದುತ್ತಿಲ್ಲ; ಬದಲಾಗಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸುತ್ತಿದೆ. ಇಂದು ಇಡೀ ಜಗತ್ತು ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಇಂದಿನ ಯುವಜನತೆಯೇ ಭಾರತದ ಭವಿಷ್ಯ ಮತ್ತು ಮುಂದಿನ ಶಕ್ತಿ. ಆದ್ದರಿಂದ ಪ್ರಸ್ತುತ ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಯುವಕರು ಹೆಗಲು ಕೊಡಬೇಕು ಎಂದು ಕರೆ ನೀಡಿದರು.  

ಈ ವೇಳೆ ಪೊಲೀಸ್ ಹಾಗೂ ಎನ್ಸಿಸಿ ತುಕಡಿಗಳು ಮತ್ತು ಶಾಲಾ ಮಕ್ಕಳಿಂದ ನಡೆದ ಪಥಸಂಚಲನದ ಗೌರವ ವಂದನೆಯನ್ನು ತಹಶೀಲ್ದಾರ್ ಸ್ವೀಕರಿಸಿದರು. ಕ್ಷೇತ್ರದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬಿಇಒ ಹಾಗೂ ಸಿಬ್ಬಂದಿ, ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.