ಚುನಾವಣೆ ಭರವಸೆಯನ್ನೀಡೇರಿಸಲು 500 ನಾಯಿಗಳ ಮಾರಣ ಹೋಮ

ಚುನಾವಣೆ ಭರವಸೆಯನ್ನೀಡೇರಿಸಲು 500 ನಾಯಿಗಳ ಮಾರಣ ಹೋಮ 500 dogs slaughtered to fulfill election promise


ಕಮರೆಡ್ಡಿ (ತೆಲಂಗಾಣ): ಮತದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಲು ತೆಲಂಗಾಣದಲ್ಲಿ ಮನುಷ್ಯತ್ವವನ್ನೇ ಮರೆತು ಸುಮಾರು 500 ಬೀದಿನಾಯಿಗಳಿಗೆ ವಿಷ ಹಾಕಿ ಕೊಂದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಹನುಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಲ್ಲಿ ಜನವರಿ ಮೊದಲ ಎರಡು ವಾರಗಳಲ್ಲಿ ಘಟನೆ ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಏಳು ಮಂದಿ ಗ್ರಾಮದ ಮುಖಂಡರು ಸೇರಿದಂತೆ ಒಟ್ಟು 15 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು "ಬೀದಿ ನಾಯಿ ಮುಕ್ತ ಗ್ರಾಮ" ಮಾಡುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ಬೀದಿನಾಯಿಗಳ ಹಾವಳಿಯಿಂದ ಬೇಸತ್ತಿದ್ದ ಜನರನ್ನು ಸೆಳೆಯಲು, ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು, ಅಭ್ಯರ್ಥಿಗಳು ಗೆದ್ದ ನಂತರ ವ್ಯವಸ್ಥಿತವಾಗಿ ನಾಯಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಕ್ರೌರ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಗಿತಿಯಾಲ ಜಿಲ್ಲೆಯ ಧರ್ಮಪುರಿ ಪುರಸಭೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ನಾಯಿಗೆ ವಿಷಕಾರಿ ಇಂಜೆಕ್ಷನ್ ನೀಡುತ್ತಿರುವುದು ಕಂಡುಬಂದಿದೆ. ಇಂಜೆಕ್ಷನ್ ನೀಡಿದ ಕೇವಲ ಒಂದು ನಿಮಿಷದಲ್ಲಿ ನಾಯಿ ಕುಸಿದು ಬಿದ್ದು ಪ್ರಾಣ ಬಿಟ್ಟಿದೆ. ರಸ್ತೆಯುದ್ದಕ್ಕೂ ನಾಯಿಗಳ ಶವಗಳು ಬಿದ್ದಿರುವುದು ಘಟನೆಯ ಭೀಕರತೆಯನ್ನು ಸಾರಿ ಹೇಳುತ್ತಿವೆ.

ವಿಶೇಷವೆಂದರೆ, ಬೀದಿನಾಯಿಗಳ ಹಾವಳಿ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಘಟನೆ ನಡೆದಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಸರ್ಕಾರಗಳು ಭಾರಿ ಪರಿಹಾರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದ ನ್ಯಾಯಾಲಯ, ಆದರೆ ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ಕೊಲ್ಲುವುದು ಕಾನೂನುಬಾಹಿರ ಮತ್ತು ಅಸಮ್ಮತ ಪರಿಹಾರ ಎಂದು ಸ್ಪಷ್ಟವಾಗಿ ಹೇಳಿತ್ತು. ಪ್ರಾಣಿ ಪ್ರೇಮಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.