ವೈಮನಸ್ಸು ತೊರೆದು ಪುನಃ ಒಂದಾದ 4 ಜೋಡಿಗಳು

4 couples reunited

ರಾಷ್ಟ್ರೀಯ ಲೋಕ ಅದಾಲತ್ ಽ ಒಂದೇ ದಿನದಲ್ಲಿ 27076 ಪ್ರಕರಣಗಳು ಇತ್ಯರ್ಥ 

ಬಾಗಲಕೋಟೆ 09:  ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಜಿಲ್ಲಾ ಕೌಂಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಬಯಸಿದ್ದ 4 ಜೋಡಿಗಳು ಮತ್ತೆ ಒಂದಾಗುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾದರು.  

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಹಿನ್ನಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ತಮ್ಮ ವಾಜ್ಯಗಳನ್ನು ಬಗೆಹರಿಸಿಕೊಂಡು ಮತ್ತೆ ಸತಿ-ಪತಿಗಳಾಗಿ ಹೊಸ ಜೀವನ ಶುರು ಮಾಡುವುದಾಗಿ ನಿರ್ದರಿಸಿದರು. ಜಿಲ್ಲಾ ನ್ಯಾಯಾಲಯದ ವಿವಿಧ ಅಧೀನ ನ್ಯಾಯಾಲಯದಲ್ಲಿಯೂ ಸಹ ವಿಚ್ಛೇದನ ಕೋರಿದ್ದ 5 ಜೋಡಿಗಳು ಸಹ ಒಂದಾಗಿದ್ದಾರೆ. 

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್‌.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇರುವ 8253 ಪೈಕಿ 4430 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 24187 ಪೈಕಿ 22646 ಪ್ರಕರಣ ಸೇರಿ ಒಟ್ಟು 27076 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥಪಡಿಸಲಾಯಿತು. ಅದಾಲತ್‌ನಲ್ಲಿ ಒಟ್ಟು 64.02 ಕೋಟಿ ರೂ.ಗಳ ಪ್ರಕರಣದ ಮೊತ್ತವಾಗಿತ್ತು.  

ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 3420 ಪ್ರಕರಣಗಳ ಪೈಕಿ 1637, ಬೀಳಗಿ ನ್ಯಾಯಾಲಯದಲ್ಲಿ 126 ಪೈಕಿ 83, ಮುಧೋಳ ನ್ಯಾಯಾಲಯದಲ್ಲಿ 542 ಪೈಕಿ 510, ಬನಹಟ್ಟಿ ನ್ಯಾಯಾಲಯದಲ್ಲಿ 1269 ಪೈಕಿ 858, ಹುನಗುಂದ ನ್ಯಾಯಾಲಯದಲ್ಲಿ 341 ಪೈಕಿ 266, ಇಲಕಲ್ಲ ನ್ಯಾಯಾಲಯದಲ್ಲಿ 402 ಪೈಕಿ 319, ಬಾದಾಮಿ ನ್ಯಾಯಾಲಯದಲ್ಲಿ 762 ಪೈಕಿ 474, ಜಮಖಂಡಿ ನ್ಯಾಯಾಲಯದಲ್ಲಿ 975 ಪೈಕಿ 276 ಹಾಗೂ ಎಫ್‌.ಟಿ.ಎಸ್‌.ಸಿ ಕೋರ್ಟನಲ್ಲಿ 416 ಪೈಕಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. 

ಬ್ಯಾಂಕಿಗೆ ಸಂಬಂಧಿಸಿದ 1572 ಪೈಕಿ 151 ಪ್ರಕರಣಗಳಿಗೆ ಒಟ್ಟು 2.90 ಕೋಟಿ ರೂ.ಗಳಿಗೆ ಇತ್ಯರ್ಥಗೊಂಡರೆ, ವಿದ್ಯುತ ಬಿಲ್‌ಗೆ ಸಂಬಂಧಿಸಿದ 204 ಪೈಕಿ 204 ಇತ್ಯರ್ಥಗೊಂಡು 4.17 ಲಕ್ಷ ರೂ, ನೀರಿನ ಕರಕ್ಕೆ ಸಂಬಂಧಿಸಿದ 4272 ಪೈಕಿ 4272ಕ್ಕೆ 1.91 ಕೋಟಿ ರೂ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 10358 ಪೈಕಿ 10358ಕ್ಕೆ 2.11 ಕೋಟಿ ರೂ,  ಆಸ್ತಿ ತೆರಿಗೆ ಸಂಬಂಧಿಸಿದಂತೆ 7102 ಪೈಕಿ 7102 ಪ್ರಕರಣಗಳನ್ನು 5.62 ಕೋಟಿ ರೂ.ಗಳಿಗೆ ಇತ್ಯರ್ಥಪಡಿಸಲಾಯಿತು.  

ಲೋಕ ಅದಾಲತ್ ಶಿಬಿರದಲ್ಲಿ ಪ್ರಧಾನ ಹಿರಿಯ ದಿವಾನಿ ನ್ಯಾಯಾಧಿಶೆ ಹೇಮಾ ಪಸ್ತಾಪೂರ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಜಿ.ಎ.ಮೂಲಿಮನಿ, ಮುಖ್ಯ ಪ್ರಧಾನ ನ್ಯಾಯಾಧೀಶರು ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧಿಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಹೆಚ್ಚುವರಿ ದಿವಾನಿ ನ್ಯಾಯಾಧೀಶ ಪ್ರಶಾಂತ ಚಟ್ನಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.