ಬೆಳಗಾವಿ ಸುವರ್ಣ ವಿಧಾನಸೌಧ ಡಿ.16: ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲು ಬೀದರ್ ತಹಶೀಲ್ದಾರ್ ಅವರು ಮುಗದಾಳ ಗ್ರಾಮದ ಸರ್ವೇ ನಂ.95 ರಲ್ಲಿ 3 ಎಕರೆ ಜಾಗ ಗುರುತಿಸಿದ್ದು, ವಕ್ಫ್ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ಪಡೆಯಲಾಗಿದೆ. ಗೃಹ ಇಲಾಖೆಗೆ ಜಮೀನು ಹಸ್ತಾಂತರವಾದ ಕೂಡಲೇ ಅಗ್ನಿಶಾಮಕ ಠಾಣೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಮನ್ನಾಖೇಳಿ ಪ್ರದೇಶ ವ್ಯಾಪ್ತಿಯಲ್ಲಿ 2020 ರಿಂದ 2025 ವರೆಗೆ ಅಗ್ನಿಅವಘಡದಲ್ಲಿ ಒಟ್ಟು ರೂ.15,75,58,500 ಮೊತ್ತದ ಆಸ್ತಿ ಹಾನಿಯಾಗಿದೆ. 292 ಅಗ್ನಿಕರೆ 33 ರಕ್ಷಣಾ ಕರೆ ಸ್ವೀಕೃತವಾಗಿವೆ. ಕೇಂದ್ರ ಸರ್ಕಾರದ ಸ್ಟಾಂಡಿಂಗ್ ಫೈರ್ ಅಡ್ವೈಜರಿ ಕೌನ್ಸಿಲ್ ನಿಯಮಗಳ ಪ್ರಕಾರ, ಜನಸಂಖ್ಯೆ, ಪ್ರತಿಕ್ರಿಯೆ, ಸಮಯ ಮತ್ತು ಟ್ರಾಫಿಕ್ ದಟ್ಟಣೆ ಆಧರಿಸಿ ಅಗ್ನಿಶಾಮಕ ಠಾಣೆ ಮತ್ತು ಅಗ್ನಿಶಾಮಕ ಉಪಕರಣಗಳ ಅಗತ್ಯತೆಯನ್ನು ನಿಗದಿಪಡಿಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಪ್ರತಿ 10 ಚ.ಕಿ.ಮೀ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ 50 ಚ.ಕಿ.ಮೀ ವ್ಯಾಪ್ತಿಗೆ 01 ಅಗ್ನಿಶಾಮಕ ಠಾಣೆ ಇರಬೇಕು. ಸ್ಪಂದನಾ ಸಮಯವು ನಗರ ಪ್ರದೇಶದಲ್ಲಿ 5 ನಿಮಿಷ ಗ್ರಾಮೀಣ ಪ್ರದೇಶದಲ್ಲಿ 20 ನಿಮಿಷವಿದೆ. ಸದ್ಯ ಮುನ್ನಾಖೇಳಿ ಗ್ರಾಮದ ಪ್ರದೇಶದಲ್ಲಿ 24 ಕಿ.ಮೀ ಅಂತರದಲ್ಲಿ ಚಿಟಗುಪ್ಪಾ ಹಾಗೂ 40 ಕಿ.ಮೀ. ಅಂತರದಲ್ಲಿ ಹುಮನಬಾದ್ ಅಗ್ನಿಶಾಮಕ ಠಾಣೆಗಳು ಇವೆ. ಇಲ್ಲಿಂದ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಅಗ್ನಿ ಕರೆ ಹಾಗೂ ಅಗ್ನಿ ಅವಘಡಗಳನ್ನು ಪರಿಗಣೆಗೆ ತಗೆದುಕೊಂಡು ಮುನ್ನಾಖೇಳಿ ಅಗ್ನಿಶಾಮ ಠಾಣೆ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಇದೇ ವೇಳೆ ಮಸ್ಕಿ ಶಾಸಕ ಬಸವನಗೌಡ ತುರುವಿನಹಾಳ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ರಾಯಚೂರು ಜಿಲ್ಲೆಯ ಪಾಮನಕಲ್ಲೂರು ಗ್ರಾಮದಲ್ಲಿ ಪೊಲೀಸ್ ಠಾಣೆ ಮಂಜೂರಾತಿ ಕುರಿತು ಇಲಾಖೆಯಲ್ಲಿ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿ ಇಲ್ಲ. ತುರುವಿಹಾಳ ಪೊಲೀಸ್ ಠಾಣೆ ಕಟ್ಟಡವನ್ನು 2005ರಲ್ಲಿ ನಿರ್ಮಿಸಿದ್ದು, ಕೇವಲ 20 ವರ್ಷಗಳಲ್ಲಿಯೇ ಶಿಥಿಲಾವಸ್ಥೆ ತಲುಪಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆ ನಿರ್ಮಿಸಲು ಪರಿಶೀಲನೆ ನಡೆಸಲಾಗುವುದು. ಇದರೊಂದಿಗೆ ತುರುವಿನಹಾಳ ಪಟ್ಟಣದಲ್ಲಿ ಒಟ್ಟು 30 ಪೊಲೀಸ್ ವಸತಿ ಗೃಹ ಹಾಗೂ 1 ಅಧಿಕಾರಿ ವಸತಿ ಗೃಹ ಸುಸ್ಥಿಯಲ್ಲಿವೆ. ಬಳಗನೂರು ಪೊಲೀಸ್ ಠಾಣೆಯ ವ್ಯಾಪ್ತಿಯ 1933 ರಲ್ಲಿ ನಿರ್ಮಿಸಿದ ಒಟ್ಟು 16 ಪೊಲೀಸ್ ವಸತಿ ಗೃಹಗಳಿವೆ. ಹಳೆಯ ವಸತಿ ಗೃಹಗಳನ್ನು ನೆಲಸಮಗೊಳಿಸಿ ಒಟ್ಟು 4 ಎಕರೆ 14 ಗುಂಟೆ ಜಾಗದಲ್ಲಿ ಒಟ್ಟು 24 ಸಿಬ್ಬಂದಿ ಹಾಗೂ 02 ಅಧಿಕಾರಿ ವಸತಿ ಗೃಹ ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಸರ್ಕಾರ 10,000 ಪೊಲೀಸ್ ಗೃಹ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಯೋಜನೆಯಡಿ ಬಳಗನೂರು ಪೊಲೀಸ್ ವಸತಿ ಗೃಹ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.