ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ 3.5 ಕೋಟಿ ಬಿಡುಗಡೆ

3.5 crores released for construction of Government First Class Women's College building

ಧಾರವಾಡ 27: 2014 ರಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡಕ್ಕೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾರಂಭಿಸಲು ಅನುಮೋದನೆ ನೀಡಿದ್ದು, 10 ಮಕ್ಕಳೊಂದಿಗೆ ಪ್ರಾರಂಭವಾದ ಈ ಕಾಲೇಜನಲ್ಲಿ ಈಗ 450 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ನೂತನ ಕಟ್ಟಡವು 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.  

ಅವರು ಇಂದು (ಮೇ. 27) ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ, ಮಾತನಾಡಿದರು.  

ಮೊದಲು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಬಿಸಿ ಊಟ ಪ್ರಾರಂಭವಾದ ಮೇಲೆ ಬಡವರ ಮಕ್ಕಳಿಗೆ ಅನುಕೂಲವಾಗಿ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರು. ಆ ಸಮಯದಿಂದ ತರಗತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಸಮವಾಗಿರಲು ಆರಂಭವಾಯಿತು. ಆದರೆ ಈ ದಿನಮಾನಗಳಲ್ಲಿ ಕೆಲವೊಂದು ಶಾಲಾ ಕೊಠಡಿಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಹೆಚ್ಚಾಗಿ ಕಾಣುತ್ತಿದ್ದಾರೆ ಎಂದು ಸಚಿವರು ಹೇಳಿದರು.  

ಈಗೀನ ದಿನಮಾನಗಳಲ್ಲಿ ರಾಜ್ಯಮಟ್ಟದಲ್ಲಿ ಹೆಣ್ಣು ಮಕ್ಕಳು ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ. ಹಾಗೆ ವಿಶ್ವವಿದ್ಯಾಲಯದಲ್ಲಿ ಮೊದಲನೆಯ ರಾ​‍್ಯಂಕ್ ಕೂಡ ಹೆಣ್ಣುಮಕ್ಕಳದೇ ಆಗಿರುತ್ತದೆ. ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಪ್ರತ್ಯೇಕ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು. 

 ಹೆಣ್ಣು ಮಕ್ಕಳು ದೃಢ ನಿರ್ಧಾರದಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ದೃಢ ಸಂಕಲ್ಪದ ಮೂಲಕ ಹೆಚ್ಚಿನ ಉದ್ಯೋಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಧಿಸಬೇಕು ಎಂದು ಅವರು ಹೇಳಿದರು.  

ಬಸವಣ್ಣವರು ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅರಿತುಕೊಳ್ಳಬೇಕು. ಅವರು ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆಯನ್ನು ತೋರಿಸಿಕೊಟ್ಟವರು. ಹಾಗೆ ಬದುಕಲು ದಾರಿ ಕಲ್ಪಿಸಿದವರು. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳ ಗೌರವವನ್ನು ಹೆಚ್ಚಿಸಿದ್ದಾರೆ. ಈಗಿನ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಐಎಎಸ್ ಅಧಿಕಾರಿಯಾಗಬಹುದು. ಹುಟ್ಟಿದ ಮನೆಯಲ್ಲಿ ಹೊಲ ಮತ್ತು ಮನೆಯಲ್ಲಿ ಪಾಲುದಾರರಾಗಬಹುದು. ಇದಕ್ಕೆ ಮೂಲ ಕಾರಣಿಕರ್ತರು ಅಂಬೇಡ್ಕರ್ ಅವರು ನೀಡಿದ ಸಂವಿಧಾನವಾಗಿದೆ. ಹೆಣ್ಣು ಮಕ್ಕಳು ಅಂಬೇಡ್ಕರ್ ಅವರ ಕೊಡುಗೆಗಳನ್ನು ಸದಾ ಸ್ಮರಿಸಬೇಕು ಎಂದು ಸಚಿವರು ತಿಳಿಸಿದರು.  

ಈಗಿನ ಪೀಳಿಗೆಯವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಸಮಾಜವನ್ನು ಕಟ್ಟುವ ನಿರ್ಧಾರವನ್ನು ಮಾಡಿ, ರಾಜಕಾರಣದಲ್ಲಿ ಆಗುಹೋಗುಗಳನ್ನು ಹತ್ತಿರದಿಂದ ಗಮನಿಸಿ, ದೇಶದ ಒಳ್ಳೆಯ ಪ್ರಜೆಯಾಗಿ ಬೆಳೆಯಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್‌. ಲಾಡ್ ಅವರು ವಿದ್ಯಾರ್ಥಿಗಳಿಗೆ ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ, ಮಹಿಳಾ ಕಾಲೇಜು ಉತ್ತಮ ಸ್ಥಳದಲ್ಲಿ ಆರಂಭವಾಗಿದೆ. ಸಾರ್ವಜನಿಕರ ಸ್ಪಂದನೆ ಚನ್ನಾಗಿದೆ. ದಿನದಿಂದ ದಿನಕ್ಕೆ ಮಹಿಳಾ ಕಾಲೇಜು ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಉನ್ನತ ಶಿಕ್ಷಣ ಸಚಿವರ ಸಹಕಾರ ಮತ್ತು ಕಾಳಜಿಯಿಂದ ಇಂದು ಕಾಲೇಜು ನೂತನ ಕಟ್ಟಡ ಕಾಮಗಾರಿ ಆರಂಭವಾಗಿದೆ. ತಮ್ಮ ಅನುದಾನದಲ್ಲಿ ಹಳೆಯ ಕಟ್ಟಡಕ್ಕೆ ತಾತ್ಕಾಲಿಕ ಹೊದಿಕೆ ಮಾಡಲಾಗಿದೆ. ನಿರಂತರ ಪ್ರಯತ್ನದ ಫಲವಾಗಿ ಇಂದು ನೂತನ ಕಟ್ಟಡದ ಕನಸು ನನಸಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕಳೆದ ವರ್ಷದಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಂದ ದೂರು ಬಂದಿತ್ತು. ಮಹಿಳಾ ಕಾಲೇಜಿನ ತರಗತಿಯ ಕೊಠಡಿಗಳು ಸೋರುತಿವೆ, ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಪರಿಸ್ಥಿತಿಯು ಬಂದಿದೆ ಎಂದಾಗ ತಕ್ಷಣ ಕ್ರಮವಹಿಸಿ, ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಧಾರವಾಡದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಚಿವರು ಅಭಯ ನೀಡಿ, ಆರ್ಥಿಕ ಅನುಮೋದನೆ ಕೊಡಿಸಿದರು. ಅದೇ ರೀತಿಯಲ್ಲಿ ಈ ವರ್ಷ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.  

ಈ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಸಾಧಕೀಯರಾಗಬೇಕು. ಈಗಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪದವಿಯನ್ನು ಪಡೆದುಕೊಂಡು, ವಿದ್ಯಾವಂತರಾಗಿ ಸಮಾಜಕ್ಕೆ ಒಳಿತನ್ನು ಬಯಸಿ, ಉನ್ನತ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.ಕಾಲೇಜು ಪ್ರಾಂಶುಪಾಲ ಡಾ.ಎಸ್‌.ಎಸ್‌.ಅಂಗಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಸದಸ್ಯರಾದ ಸುರೇಶ ಬೆದ್ರೆ, ಡಾ.ಮಯೂರ ಮೋರೆ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾಲೇಜು ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಮಿಲಿಟರಿ ಬಾಲಕಿಯರ ವಸತಿ ನಿಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಧಾರವಾಡ 27: ಶಹರದ ಸಪ್ತಾಪೂರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ 2025-26ನೇ ಸಾಲಿಗೆ ಧಾರವಾಡ, ಗದಗ, ಹಾವೇರಿ, ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶ, ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಯುದ್ದದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣು ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

 ಈ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 5 ನೇ ತರಗತಿಯಿಂದ ಪಿಯುಸಿ-2 ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.  ವಸತಿ ನಿಲಯದಲ್ಲಿ ವಾಸ್ತವ್ಯ ಮತ್ತು ಊಟೋಪಚಾರಗಳು ಉಚಿತವಾಗಿದ್ದು, ಮಾಜಿ ಸೈನಿಕರ ಹೆಣ್ಣು ಮಕ್ಕಳು ಈ ಸೌಲಭ್ಯದ ಉಪಯೋಗ ಪಡೆಯಬಹುದಾಗಿರುತ್ತದೆ.  ವಸತಿ ನಿಲಯದಲ್ಲಿ ಧಾರವಾಡ ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಮಾತ್ರ  ನಿಲಯದಲ್ಲಿ ಪ್ರವೇಶ ನೀಡಲಾಗುವದು. 

ಆಸಕ್ತ ವಿದ್ಯಾರ್ಥಿಗಳು ಮೇ 21, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ:0836-2440176 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

ಮುಂಗಾರು ಬೆಳೆಗಳ ಬೀಜೋಪಚಾರಧಾರವಾಡ 27: ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ರೈತರ ಬಿತ್ತನೆ ಪೂರ್ವದಲ್ಲಿ ರೈತರು ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ವಲಯವಾರು ಸೂಚಿಸಿರುವ ರೋಗ ಹಾಗೂ ಬರ ನಿರೋದಕ ಸೂಕ್ತ ತಳಿಗಳ ಬೀಜಗಳನ್ನು ಆಯ್ಕೆಮಾಡಿಕೊಳ್ಳಬೇಕು. ಬಿತ್ತುವ ಮೊದಲು ರೈತರು, ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಬೀಜೋಪಚಾರ ಕಡ್ಡಾಯವಾಗಿ ಮಾಡುವುದು ಹಾಗೂ ಬೆಳೆ ಪರಿವರ್ತನೆಯನ್ನು (ಕಳೆದ ಸಾಲಿನಲ್ಲಿ ಏಕದಳ ಬೆಳೆ ಬೆಳೆದ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ದ್ವಿದಳ ಬೆಳೆ ಬೆಳೆಯುವುದು ಹಾಗೂ ಕಳೆದ ಸಾಲಿನಲ್ಲಿ ದ್ವಿದಳ ಬೆಳೆ ಬೆಳೆದ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ಏಕದಳ ಬೆಳೆ ಬೆಳೆಯುವುದು) ಮಾಡುವುದನ್ನು ರೈತರು ಮರೆಯಬಾರದು. 

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ಬೆಳೆ ಹಾಗೂ ಬೀಜೋಪಚಾರ ವಿಧಾನ: ಗೋವಿನ ಜೋಳ 

ಉರಿಜಿಂಗಿ ರೋಗಕ್ಕೆ: ಪ್ರತಿ ಕಿ.ಗ್ರಾಂ. ಬೀಜಕ್ಕೆ 25 ಗ್ರಾಂ ಅಝೇಸ್ಪಿರಿಲ್ಲಂ (ಎಸಿಡಿ 15 ಅಥವಾ ಎಸಿಡಿ 20 ತಳಿ) ಹಾಗೂ 6 ಗ್ರಾಂ. ಟ್ರೈಕೊಡರ್ಮಾ ಹಾರ್ಜಿಯಾನಮ್ ಶೀಲೀಂಧ್ರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.ಕೇದಿಗೆ ರೋಗಕ್ಕೆ: ಬಿತ್ತನೆಯ ಬೀಜವನ್ನು ಪ್ರತಿ ಕಿ. ಗ್ರಾಂ. ಬೀಜಕ್ಕೆ 2 ಗ್ರಾಂ. ಮೆಟಲಾಕ್ಸಿಲ್ (4ಅ) + ಮ್ಯಾಂಕೊಜೆಬ್ (64ಅ) ಎಮ್‌.ಜೆಡ್‌. 72 ಡಬ್ಲೂ.ಪಿ. ಅಂತರವ್ಯಾಪ್ತಿ ಶೀಲೀಂಧ್ರನಾಶಕದಿಂದ ಉಪಚರಿಸಬೇಕು ಹಾಗೂ ರೋಗಗ್ರಸ್ಥ ಗಿಡಗಳನ್ನು ಬೇರುಸಹಿತ ಕಿತ್ತು ಸುಡಬೇಕು.ಸೋಯಾಅವರೆ, ಹೆಸರು ಹಾಗೂ ಶೇಂಗಾ ಬೆಳೆಗಳಿಗೆ: ಪ್ರತಿ ಕಿ. ಗ್ರಾಂ. ಬಿತ್ತನೆ ಬೀಜವನ್ನು 3 ಗ್ರಾಂ ಥೈರಾಮ (75 ಡಬ್ಲ್ಯೂಪಿ) ಅಥವಾ ಕ್ಯಾಪ್ಟನ್ (80 ಡಬ್ಲ್ಯೂಪಿ) ಅಥವಾ ಕಾರ್ಬಾಕ್ಷಿನ್ ನಿಂದ (75 ಡಬ್ಲ್ಯೂಪಿ) ಉಪಚರಿಸಬೇಕು. ನಂತರ 1 ಲೀ. ನೀರಿಗೆ 100 ಗ್ರಾಂ ಬೆಲ್ಲ ಹಾಕಿ ಕರಗಿಸಿ ಪಾಕವನ್ನು ತಯಾರಿಸಿಕೊಳ್ಳಬೇಕು, ಬಿತ್ತುವ ಬೀಜಗಳನ್ನು ಹರಡಿ ಅದರ ಮೇಲೆ ತಯಾರಿಸಿದ ಬೆಲ್ಲದ ಪಾಕವನ್ನು ಸರಿಯಾಗಿ ಎಲ್ಲ ಕಾಳುಗಳಿಗೆ ಹತ್ತುವಂತೆ ಸಿಂಪಡಿಸಿ 10 ಗ್ರಾಂ ಟ್ರೈಕೊಡರ್ಮಾ 10 ಗ್ರಾಂ ರೈಜೋಬಿಯಂ ಹಾಗೂ 10 ಗ್ರಾಂ ರಂಜಕ ಕರಗಿಸುವ ಅಣುಜೀವಿಯನ್ನು (ಪಿಎಸ್‌ಬಿ) ಬೀಜಕ್ಕೆ ಉಪಚರಿಸಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು.  

ಬೀಜ ಉತ್ಪಾದನೆ ಅಂಕಿ ಅಂಶಗಳ ಪ್ರಕಾರ ಎಲ್ಲರಿಗೂ ಅದೀಕೃತ ಬೀಜೋತ್ಪಾದನೆ ಮಾಡಿದ ಬೀಜದ ಲಭ್ಯತೆ ಸ್ವಲ್ಪ ಕಷ್ಟ. ಆದರಿಂದ ಮುಂಗಾರು ಹಂಗಾಮಿಗೆ ಬೇಕಾಗಿರುವ 3 ವರ್ಷದ ಒಳಗಡೆ ಖರೀದಿ ಮಾಡಿದ ಸುಧಾರಿತ ಸ್ವಯಂ ಪರಾಗ ಸ್ಪರ್ಶಿತ (ಖಜಟಜಿ ಕಠಟಟಿಚಿಣಜಜ) ತಳಿಯ ಬೀಜವು ಮನೆಯಲ್ಲಿ ಇದ್ದರೆ ಅಂತಹ ಬೀಜಗಳ ಮೊಳಕೆ ಪರೀಕ್ಷೆ ಮಾಡಿ ತಾವು ಬಿತ್ತಿ ಮತ್ತು ನಿಮ್ಮ ಊರಿನ ಇತರ ರೈತರಿಗೂ ಕೊಡಬಹುದು ಎಂದು ರೈತಭಾಂದವರಿಗೆ ತಿಳಿಸಲಾಗಿದೆ.  

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.