ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳು ಕಡ್ಡಾಯ ಅನುಷ್ಠಾನವಾಗಲಿ-ಡಾ.ಈಶ್ವರ ಉಳ್ಳಾಗಡ್ಡಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳು ಕಡ್ಡಾಯ ಅನುಷ್ಠಾನವಾಗಲಿ-ಡಾ.ಈಶ್ವರ ಉಳ್ಳಾಗಡ್ಡಿ 29 points should be implemented mandatorily to improve SSLC results - Dr. Eshwar Ullagadi

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳು ಕಡ್ಡಾಯ ಅನುಷ್ಠಾನವಾಗಲಿ-ಡಾ.ಈಶ್ವರ ಉಳ್ಳಾಗಡ್ಡಿ 

ಧಾರವಾಡ 30:  2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಫಲಿತಾಂಶ ಸುಧಾರಣೆಗಾಗಿ ಇಲಾಖೆ ನಿರ್ದೇಶಿಸಿದ 29 ಅಂಶಗಳ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು. 

   ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರಿ​‍್ಡಸಿದ್ದ ಬೆಳಗಾವಿ ವಿಭಾಗ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರೀಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. 

 ವಿಭಾಗದ ಎಲ್ಲ ಪ್ರೌಢಶಾಲೆಗಳಲ್ಲಿ ಡಿಸೆಂಬರ್ 2025ರ ಅಂತ್ಯದೊಳಗೆ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮ ಪೂರ್ಣಗೊಳಿಸುವುದರತ್ತ ಗಮನಹರಿಸುವುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾರ್ಯಯೋಜನೆ ರೂಪಿಸಿ ಜಾರಿಗೊಳಿಸುವುದು. ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಆರೋಗ್ಯಕರ ಜೀವನ ಶೈಲಿ, ಮೊಬೈಲ್ ಬಳಕೆಯ ದುಷ್ಪರಿಣಾಮಗಳು, ಪೌಷ್ಟಿಕ ಆಹಾರ ಸೇವನೆಯ ಮಹತ್ವ ಕುರಿತು ತಿಳುವಳಿಕೆ ನೀಡುವುದು. ಫಲಿತಾಂಶ ಸುಧಾರಣೆಗಾಗಿ ಶಾಲೆಯಲ್ಲಿ ಕೈಗೊಳ್ಳುತ್ತಿರುವ ಉಪಕ್ರಮಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು 10ನೇ ತರಗತಿಯ ಪೋಷಕರಿಗೆ ಮಾಸಿಕ ಪೋಷಕ-ಶಿಕ್ಷಕರ ಸಭೆಗಳನ್ನು ಪ್ರತಿ ಶಾಲೆಯಲ್ಲಿ ನಡೆಸುವುದು. ಕಳೆದ ಎರಡು ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ, ಆಯಾ ಶಾಲಾ ಹಂತದಲ್ಲಿರುವ ಸಮಸ್ಯೆಗಳನ್ನು ನಿಯಮಾನುಸಾರ ಪರಿಹರಿಸಲು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಅಗತ್ಯ ಕ್ರಮವಹಿಸುವುದು. 2023-24 ಮತ್ತು 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿಶ್ಲೇಷಣೆಯ ಆಧಾರದ ಮೇಲೆ ಜಿಲ್ಲಾ ಸರಾಸರಿಗಿಂತ ಕಡಿಮೆ ದಾಖಲಿಸಿರುವ ಶಾಲೆಗಳು ಫಲಿತಾಂಶ ಸುಧಾರಣೆಗಾಗಿ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆಗಳನ್ನು ರೂಪಿಸುವುದು. ಈ ಎಲ್ಲ ಅಂಶಗಳು ಶಾಲೆಯಲ್ಲಿ ಅನುಷ್ಠಾನವಾಗುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು(ಅ) ಹಾಗೂ ಉಪನಿರ್ದೇಶಕರು (ಆ) ಖಾತರಿಪಡಿಸಿಕೊಳ್ಳುವುದು. ರಾಜ್ಯ ಪಠ್ಯಕ್ರಮದ ಶಾಲೆಗಳ 1ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸಲು ಶಿಕ್ಷಕರಿಗೆ ಸೂಚಿಸುವಂತೆ ತಿಳಿಸಿದರು. ಮಳೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಯಲ್ಲಿರುವ ಪ್ರತಿ ತರಗತಿ ಕೊಠಡಿಗಳು ಹಾಗೂ ಇತರೆ ಕೊಠಡಿಗಳು ಸುಸ್ಥಿತಿಯಲ್ಲಿರುವ ಬಗ್ಗೆ ಗಮನ ಹರಿಸುವುದು ತುಂಬಾ ಆದ್ಯತೆಯ ವಿಷಯವಾಗಬೇಕು. ದುರಸ್ಥಿ ಅವಶ್ಯಕತೆ ಇರುವ ತರಗತಿ ಕೊಠಡಿಗಳನ್ನು ಬಳಸದೇ ಪರ್ಯಾಯ ಕೊಠಡಿಗಳಲ್ಲಿ ತರಗತಿ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಇಂತಹ ಕೊಠಡಿಗಳಿಗೆ ಬೀಗ ಹಾಕಿ, ವಿದ್ಯಾರ್ಥಿಗಳು ಇಂತಹ ಕೊಠಡಿಗಳ ಹತ್ತಿರ ತೆರಳದಂತೆ ಗಮನ ಹರಿಸಲು ಮುಖ್ಯೋಪಾಧ್ಯಾಯರಿಗೆ ಸೂಚಿಸುವಂತೆಯೂ ನಿರ್ದೇಶಿಸಿದರು. 

 ಆಯುಕ್ತಾಲಯದ ಪ್ರಭಾರ ನಿರ್ದೇಶಕರಾದ ಈಶ್ವರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಉಪನಿರ್ದೇಶಕರಾದ ಗೀರೀಶ ಪದಕಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಜಾತ ತಿಮ್ಮಾಪುರ ವಂದಿಸಿದರು. ಸಭೆಯಲ್ಲಿ ಬೆಳಗಾವಿ ವಿಭಾಗದ ಎಲ್ಲ ಉಪನಿರ್ದೇಶಕರು (ಆ), ಉಪನಿರ್ದೇಶಕರು (ಅ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.