ಹೂವಿನಹಡಗಲಿ 17: ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಸೋಮವಾರ ಕಲುಷಿತ ನೀರು ಕುಡಿದ ಪರಿಣಾಮ, 20 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗ್ರಾಮದ ವಡ್ಡರಗೇರಿಯಲ್ಲಿ 13 ಜನ ಮತ್ತು ಕುರಬಗೇರಿ ಓಣಿಯಲ್ಲಿ 7 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.
ರೋಗಿಗಳು ಹೂವಿನಹಡಗಲಿಯ ಅನನ್ಯ ಆಸ್ಪತ್ರೆಯಲ್ಲಿ ಪವಿತ್ರ, ಕೆಂಚಮ್ಮ, ನಿಂಗರಾಜ ಇವರು ಚಿಕಿತ್ಸೆ ಪಡೆಯುತ್ತಿದ್ದರೇ, ಇತ್ತ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ರಾಧಿಕಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಉಳಿದಂತೆ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಾರದ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳಿದವರು ವಿವಿಧ ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗ್ರಾಮ 3 ಸಾವಿರ ಜನಸಂಖ್ಯೆ ಹೊಂದಿದೆ. ಇಡೀ ಗ್ರಾಮಕ್ಕೆ ಒಂದು ಶುದ್ಧ ಕುಡಿವ ನೀರಿನ ಘಟಕವಿದೆ. ಉಳಿದಂತೆ ಗ್ರಾಮದ ವ್ಯಾಪ್ತಿಯಲ್ಲಿ 5 ಕೊಳವೆ ಬಾವಿಗಳಿಂದ ಮನೆಗಳಿಗೆ ನೀರು ಪೂರೈಕೆಮಾಡುತ್ತಿದ್ದಾರೆ. 2 ಕೊಳವೆ ಬಾವಿಗಳು ಕೆರೆಯಂಗಳದಲ್ಲಿವೆ. ಉಳಿದಂತೆ ಗ್ರಾಮದ ವಿವಿಧ ಕಡೆಗಳಲ್ಲಿರುವ ಕೊಳವೆ ಬಾವಿಗಳಿಂದ ನೀರು ಸರಬರಾಜು ಆಗುತ್ತಿದೆ.ಶುದ್ದ ಕುಡಿವ ನೀರು ಕುಡಿದರೇ ಕೈ ಕಾಲು ನೋವು ಬರುತ್ತದೆ ಎಂದು ನಂಬಿಕೊಂಡು, ವಡ್ಡರಗೇರಿ, ಕುರಬಗೇರಿ ಜನ ಇಂದಿಗೂ ಕೊಳವೆ ಬಾವಿಯ ನೀರನ್ನೇ ಕುಡಿಯುತ್ತಿದ್ದಾರೆ. ಆ ಕೊಳವೆ ಬಾವಿಯ ಪೈಪ್ಲೈನ್ ತಿಪ್ಪೆಗುಂಡಿಯಲ್ಲಿ ಸೋರಿಕೆಯಾಗುತ್ತಿದೆ.
ಜತೆಗೆ ಒಂದು ಕೊಳವೆಯು ನೆಲ ಮಟ್ಟದಲ್ಲೇ ಇರುವ ಕಾರಣ, ಪಕ್ಕದ ಗುಂಡಿಯಲ್ಲಿನ ಕಲುಷಿತ ನೀರು ಕೊಳವೆ ಬಾವಿ ಸೇರುತ್ತಿದೆ. ಅದೇ ನೀರು ಗ್ರಾಮಕ್ಕೆ ಪೊರೈಕೆಯಾಗಿದೆ. ಜನ ಆ ಕಲುಷಿತ ನೀರು ಕುಡಿದು ವಾಂತಿ ಭೇದಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಗ್ರಾಮಕ್ಕೆ ತಹಶೀಲ್ದಾರ್ ಸಂತೋಷ.ಟಿ.ಎಚ್.ಒ ಸ್ವಪ್ನ ಕಟ್ಟಿ .ಡಾ.ಕಾರ್ತಿಕ ಅವರು ಭೇಟಿ ನೀಡಿ ಪಂಚಾಯ್ತಿಯಿಂದ ಸ್ವಚ್ಚತೆಗೆ ಕ್ರಮ ಕ್ಯೆಗೊಳ್ಳಬೇಕೆಂದು ಸೂಚಿಸಲಾಗಿದೆ.