ಚಿಕ್ಕೋಡಿ ತಾಲೂಕಿನ 4 ಏತ ನೀರಾವರಿ ಯೋಜನೆಗೆ 2 ಕೋಟಿ ಅನುದಾನ ಮಂಜೂರು
2 crore grant sanctioned for 4 lift irrigation projects in Chikkodi taluk
ಚಿಕ್ಕೋಡಿ 07: ಚಿಕ್ಕೋಡಿ- ಸದಲಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾಲೂಕಿನ ಇಂಗಳಿ, ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮಗಳ ರೈತರ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಾಲ್ಕು ಏತ ನೀರಾವರಿ ಯೋಜನೆಗಳಿಗೆ ಒಟ್ಟು 2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.
ಯಕ್ಸಂಬಾ ಪಟ್ಟಣದಲ್ಲಿ ಮಂಜೂರಾದ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ರೈತರು ತಮ್ಮ ಜಮೀನುಗಳಿಗೆ ಏತ ನೀರಾವರಿ ಯೋಜನೆಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆ ಬೇಡಿಕೆಯ ಅನುಗುಣವಾಗಿ ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದರು. ಈ ಯೋಜನೆಗಳಿಂದ ಒಟ್ಟು 159.01 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಗುಣಮಟ್ಟದ ಕಾಮಗಾರಿ ಮೂಲಕ ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಮುಂದುವರೆಯಲು ಅನುಕೂಲವಾಗಲಿದೆ ಎಂದು ಹೇಳಿದರು.ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಕಾಮಗಾರಿಯನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅನುದಾನ ವಿವರ: ಇಂಗಳಿ ಗ್ರಾಮ (ಮೋಹನ ನಾಮದೇವ ಪಾಟೋಳೆ ಹಾಗೂ ಇತರರು) 51.19 ಎಕರೆ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆಗೆ 83 ಲಕ್ಷ ಅನುದಾನ. ಇಂಗಳಿ ಗ್ರಾಮ (ವಿನಾಯಕ ಬಸಪ್ಪಾ ಚೌಗುಲೆ ಹಾಗೂ ಇತರರು) 45.25 ಎಕರೆ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆಗೆ 55 ಲಕ್ಷ ರೂ ಅನುದಾನ. ಯಕ್ಸಂಬಾ ಗ್ರಾಮ (ತಾನಾಜಿ ದತ್ತು ಪವಾರ ಹಾಗೂ ಇತರರು) 24.37 ಎಕರೆ ಜಮೀನುಗಳಿಗೆ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗೆ 42 ಲಕ್ಷ ರೂ ಅನುದಾನ. ಯಡೂರವಾಡಿ ಗ್ರಾಮ (ಸದಾಶಿವ ದುಂಡಪ್ಪಾ ಸಾವಳೆ ಹಾಗೂ ಇತರರು) 37 ಎಕರೆ ಜಮೀನುಗಳಿಗೆ ಏತ ನೀರಾವರಿ ಯೋಜನೆಗೆ 20 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಹೂವಣ್ಣಾ ಚೌಗುಲಾ, ರಮೇಶ ಮುರಚಿಟ್ಟೆ, ಚಂದ್ರಕಾಂತ ಲಂಗೋಟೆ, ವಿಶ್ವನಾಥ ಮಾನೆ, ಸಂಜು ಪಿರಾಜೆ, ಅಜೀತ ಕಿಲ್ಲೇದಾರ, ಶಿವಾಜಿ ಪವಾರ, ಗಜು ಚಿನುಮನೆ, ಸದಾಶಿವ ಕುಂಬಾರ ಸೇರಿದಂತೆ ರೈತ ಫಲಾನುಭವಿಗಳ ಮುಖಂಡರು ಉಪಸ್ಥಿತರಿದ್ದರು.
ಚಿಕ್ಕೋಡಿ ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ದೊರೆಯುವುದು ನಮ್ಮ ಮೊದಲ ಆದ್ಯತೆ. ಏತ ನೀರಾವರಿ ಯೋಜನೆಗಳಿಂದ ಖುಷ್ಕಿ ಜಮೀನುಗಳಿಗೂ ನೀರು ಸಿಗಲಿದ್ದು, ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ.
ಗಣೇಶ ಹುಕ್ಕೇರಿ ಶಾಸಕರು ಚಿಕ್ಕೋಡಿ- ಸದಲಗಾ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 