ಸ್ವಾತಂತ್ರ್ಯ ಚಳುವಳಿಯ ಬೀಜ ಬಿತ್ತನೆಗೆ ವಂದೇ ಮಾತರಂ ಸಹಕಾರಿ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ

ಸ್ವಾತಂತ್ರ್ಯ ಚಳುವಳಿಯ ಬೀಜ ಬಿತ್ತನೆಗೆ ವಂದೇ ಮಾತರಂ ಸಹಕಾರಿ:  ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ 150 years for Vande Mataram: Mass singing by the district administration

ವಂದೇಮಾತರಂ ಗೀತೆಗೆ 150 ವರ್ಷಗಳು: ಜಿಲ್ಲಾಡಳಿತದಿಂದ ಸಾಮೂಹಿಕ ಗಾಯನ 

ಕೊಪ್ಪಳ ನವೆಂಬರ್ 07: ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದಾಗಿ ಜನರಲ್ಲಿ ದೇಶದ ಏಕತೆಯ ಭಾವನೆ ಮೂಡಿ ಸ್ವಾತಂತ್ರ್ಯ ಚಳುವಳಿಯ ಬೀಜ ಬಿತ್ತನೆಗೆ ಈ ಗೀತೆ ಸಹಕಾರಿಯಾಯಿತು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು. 

ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವಂದೇಮಾತರಂ ಗೀತೆಗೆ ನವೆಂಬರ್ 7ಕ್ಕೆ 150 ವರ್ಷಗಳು ತುಂಬಿದ ಪ್ರಯುಕ್ತ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ “ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ''ದಲ್ಲಿ ಭಾಗವಹಿಸಿ ಮಾತನಾಡಿದರು. 

ಯಾವ ಸಂದರ್ಭದಲ್ಲಿ ಜನರಿಗೆ ದೇಶ ಭಕ್ತಿ ಪರಿಕಲ್ಪನೆ ಇರಲಿಲ್ಲ. ಆಗ ರಚನೆಯಾದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶ ಪ್ರೇಮ, ಭಕ್ತಿ, ಭಾವನೆ ಹುಟ್ಟಿಕೊಳ್ಳಲು ಅನುಕೂಲವಾಯಿತು. ವಂದೇ ಮಾತರಂ ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿ ರವರು 1875 ನವೆಂಬರ್ 7ರ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ರಚಿಸಿದ್ದು, ವಂದೇ ಮಾತರಂ ಗೀತೆಯು ಮೊದಲು ಸಾಹಿತ್ಯಿಕ ಪತ್ರಿಕೆ ಬಂಗದರ್ಶನದಲ್ಲಿ ಅವರ ಕಾದಂಬರಿ ಆನಂದಮಠದ ಭಾಗವಾಗಿ ಧಾರಾವಾಹಿಯಾಗಿ ಮತ್ತು 1887ರಲ್ಲಿ ಸ್ವತಂತ್ರ ಪುಸ್ತಕವಾಗಿ ಮುದ್ರಣಗೊಂಡಿತು. ಈ ಅವಧಿಯಲ್ಲಿ ಭಾರತವು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು. ವಸಾಹತುಶಾಹಿ ಆಳ್ವಿಕೆಗೆ ರಾಷ್ಟ್ರೀಯ ಗುರುತಿನ ಪ್ರಜ್ಞೆ ಮತ್ತು ಪ್ರತಿರೋಧ ಬೆಳೆಯುತ್ತಿತ್ತು. ಈ ಸಂದಂರ್ಭದಲ್ಲಿ ಶಕ್ತಿ ಸಮೃದ್ಧಿ ಮತ್ತು ದೈವತ್ವದ ಸಾಕಾರ ರೂಪವಾಗಿ ಮಾತೃಭೂಮಿಯನ್ನು ಸ್ವಾಗತಿಸುವ ಈ ಹಾಡು ಭಾರತದ ಏಕತೆ, ಸಮಗ್ರತೆ ಮತ್ತು ಸ್ವಾಭಿಮಾನದ ಜಾಗೃತಿ ಮನೊಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯ ಪ್ರೇರಣೆಯನ್ನು ನೀಡಿತು ಎಂದರು. 

ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಸಚಿವಾಲಯವು ವಂದೇ ಮಾತರಂ ಗೀತೆಯ ಐತಿಹಾಸಿಕ ಮಹತ್ವ ಮತ್ತು ರಾಷ್ಟ್ರೀಯ ಮಹತ್ವವನ್ನು ಗುರುತಿಸಿ ಬಂಕಿಮ್ ಚಂದ್ರ ಚಟರ್ಜಿ ಅವರ ಕೊಡುಗೆಯನ್ನು ಎತ್ತಿ ತೋರಿಸಲು ಹಾಗೂ ಗೀತೆ ಒಳಗೊಂಡಿರುವ ಏಕತೆ, ತ್ಯಾಗ ಮತ್ತು ಮಾತೃಭೂಮಿಯ ಮೇಲಿನ ಪ್ರೀತಿಯ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಾಮೂಹಿಕ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  

ಈ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಶಕುಂತಲಾ ಬಿನ್ನಾಳ ಹಾಗೂ ತಂಡದವರು ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.