ಶಿವಶರಣ ಗುಂಡಯ್ಯನವರ ಜೀವನ ಎಲ್ಲರಿಗೂ ಸ್ಪೂರ್ತಿ: ಬಸವಲಿಂಗ ಶ್ರೀಗಳು

ಶಿವಶರಣ ಗುಂಡಯ್ಯನವರ ಜೀವನ ಎಲ್ಲರಿಗೂ ಸ್ಪೂರ್ತಿ: ಬಸವಲಿಂಗ ಶ್ರೀಗಳು 14th commemoration of Kumbar Gundayya at Ugara Khurda

ಉಗಾರ ಖುರ್ದನಲ್ಲಿ ಕುಂಬಾರ ಗುಂಡಯ್ಯನವರ 14ನೇ ಸ್ಮರಣೋತ್ಸವ;  

ಕಾಗವಾಡ 25: ಮಣ್ಣು ತುಳಿಯುತ್ತ, ಕುಣಿಯುತ್ತ ತನ್ನ ಭಕ್ತಿಯಲ್ಲಿ ಲೀನನಾದ ಶಿವಶರಣ ಕುಂಬಾರ ಗುಂಡಯ್ಯನನ್ನು ಕಂಡ ಶಿವ ಕೈಲಾಸದಲ್ಲಿ ಕುಣಿಯಲಾರಂಭಿಸಿದ್ದ. ಅಂತಹ ಮಹಾನ ವ್ಯಕ್ತಿಯ ವಂಶಜರಾದ ಕುಂಬಾರರು, ಜೇನು ನೊಣಗಳಂತೆ ದಿನವೆಲ್ಲಾ ಸುತ್ತಿ, ಜೇಣು ಸಂಗ್ರಹಿಸಿ, ಸಂಜೆ ಒಂದೇ ಗೂಡಿಗೆ ಬಂದು ಸೇರುವಂತೆ, ಒಕ್ಕಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ವಿಜಯಪೂರ ಜ್ಞಾನಯೋಗಾಶ್ರಮದ ಪಪೂ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ. 

ಅವರು, ಬುಧವಾರ ದಿ. 25 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಶ್ರೀ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘ, ತಾಲೂಕಾ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯನವರ 14 ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.  

ಬೆಳಿಗ್ಗೆ 8 ಗಂಟೆಗೆ ಸುಮಂಗಲೆಯರಿಂದ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ, ವಾದ್ಯವೃಂದಗಳೊಂದಿಗೆ ಮೆರವಣಿಗೆಯ ಮುಖಾಂತರ ನದಿಯಿಂದ ಕುಂಭಹೊತ್ತು ಮಹಾದೇವ ಮಂದಿರದ ಆಗಮಿಸಿ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಲಾಯಿತು. 

ನಂತರ ನಡೆದ ಕಾರ್ಯಕ್ರಮವನ್ನು ಶಿವಶರಣ ಗುಂಡಯ್ಯನವರ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಚಾಲನೆ ನೀಡಲಾಯಿತು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಮುಖಂಡರನ್ನು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ತೆಲಸಂಗದ ಪಪೂ ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಗುರುಪಾದ ಕುಂಬಾರ, ಸುಭಾಶ ಕುಂಬಾರ, ಅಣ್ಣಾಸಾಬ ಕುಂಬಾರ, ಸದಾಶಿವ ಕುಂಬಾರ, ಬಾಬಾಸಾಬ ಕುಂಬಾರ, ಡಾ. ಆನಂದ ಕುಂಬಾರ, ವಿರುಪಾಕ್ಷಿ ಕುಂಬಾರ, ಯೋಗೇಶ ಕುಂಬಾರ ಸೇರಿದಂತೆ ತಾಲೂಕಿನ ಕುಂಬಾರ ಸಮಾಜದ ಬಾಂಧವರು, ಮಹಿಳೆಯರು ಉಪಸ್ಥಿತರಿದ್ದರು.