ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ
Villagers oppose cow encroachment plan
ಕೊಪ್ಪಳ 02: ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಮತ್ತು ಗೋಮಾಳ ಪ್ರದೇಶವನ್ನು ಪ್ರಭಾವಿಗಳು ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದು, ಜಿಲ್ಲಾಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.ಶತಮಾನಗಳಿಂದಲೂ ಶಹಪುರ ಗ್ರಾಮದ ಉತ್ತರ-ಈಶಾನ್ಯ ದಿಕ್ಕಿನಲ್ಲಿರುವ ಸವುಳು ಹಳ್ಳದ ಕೆರೆ ಮತ್ತು ಸರ್ಕಾರಿ ಗೋಮಾಳ ಈ ಗ್ರಾಮದ ದನ, ಕುರಿ, ಆಡು, ಎತ್ತು, ಎಮ್ಮೆಗಳಿಗೆ ಆಸರೆಯಾಗಿದೆ. ದನ ಮತ್ತು ಕುರಿಗಾಹಿಗಳು ಕೆರೆಯ ದಡದಲ್ಲಿನ ಗೋಮಾಳದಲ್ಲಿ ಶತಮಾನಗಳಿಂದಲೂ ಬೀಡು ಬಿಟ್ಟಿದ್ದಾರೆ.
ಗ್ರಾಮಕ್ಕೆ ಇದೊಂದೇ ಜಲಮೂಲ ಮತ್ತು ಆಸರೆ ಆಗಿರುವುದರಿಂದ ಅನೇಕ ಕುಟುಂಬಗಳು ಇದನ್ನೇ ಆಶ್ರಯಿಸಿವೆ. ಕೋಳಿ ಫಾರಂ ಉದ್ಯಮ ನಡೆಸುವ ಶ್ರೀಧರ್ ಎನ್ನುವ ಪ್ರಭಾವಿ ವ್ಯಕ್ತಿ ಸವುಳು ಹಳ್ಳದ ಕೆರೆ ಪಕ್ಕದಲ್ಲಿ ಅನ್ಯರ ಜಮೀನು ಖರೀದಿಸಿದ್ದಾರೆ. ಇದರ ನೆಪದಲ್ಲಿಯೇ ಸವುಳು ಹಳ್ಳದ ಕೆರೆಯ ವ್ಯಾಪ್ತಿಯ ಸುಮಾರು 40 ಎಕರೆ ಜಮೀನನನ್ನು ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈ ಹಿಂದಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವಧಿಯಲ್ಲಿ ಅತಿಕ್ರಮಣ ಮಾಡಲು ಮುಂದಾಗಿದ್ದ ಶ್ರೀಧರ್ ವಿರುದ್ಧ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ಈ ಕುರಿತು ಅಂದಿನ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರು. ಅಂದಿನಿಂದ ಗಾಯಬ್ ಆಗಿದ್ದ ಶ್ರೀಧರ್ ಎನ್ನುವ ವ್ಯಕ್ತಿ ಇದೀಗ ತಮ್ಮ ಹಿಂಬಾಲಕರನ್ನು ಮುಂದೆ ಬಿಟ್ಟು ಮತ್ತೆ ಸರ್ಕಾರಿ ಗೋಮಾಳ ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದಾರೆ. ಕುರಿ ಮತ್ತು ದನಗಾಹಿಗಳು ಮೇಯಿಸಲು ಅಡವಿಗೆ ತೆರಳುವ ಸಂದರ್ಭದಲ್ಲಿ ಹೊಂಚು ಹಾಕಿ ಗೋಮಾಳ ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ವಿಷಯ ಗೊತ್ತಾದ ಕೂಡಲೇ ‘ಸವುಳು ಹಳ್ಳದ ಕೆರೆ ಅಭಿವೃದ್ಧಿ’ ಸಮಿತಿಯ ಪದಾಧಿಕಾರಿಗಳು ಮುನಿರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಟ್ರಾಕ್ಟರ್ ನಿಂದ ಅತಿಕ್ರಮಣ ಮಾಡಿ, ಗೋಮಾಳ ಜಾಗೆಯಲ್ಲಿ ಮಣ್ಣು ಸಮ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ.
ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಯವರು ಆಗಮಿಸಿ ತೆರವುಗೊಳಿಸಿದ್ದಾರೆ.ಈ ಭಾಗದಲ್ಲಿ ಪ್ರಭಾವಿಗಳ ಮತ್ತು ಉದ್ಯಮಿಗಳಿಂದ ಗೋಮಾಳ ಮತ್ತು ಕೆರೆ ಅತಿಕ್ರಮಣ ಮಾಡುವ ಹುನ್ನಾರ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆರೆ ಮತ್ತತು ಸುತ್ತಲಿನ ರೈತರ ಜಮೀನುಗಳನ್ನು ಅತಿಕ್ರಮಣ ಮಾಡುವ ದಂಧೆ ನಡೆಯುತ್ತಿದೆ. ಇದಕ್ಕೆ ಕಂದಾಯ ಅಧಿಕಾರಿಗಳ ಕುಮ್ಮಕ್ಕೂ ಇದೆ. ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕುರಿ ಮತ್ತು ದನಗಾಹಿಗಳಿಗೆ ನೆರವಾಗಬೇಕು.
ಸರ್ಕಾರಿ ಸ್ವಾಮ್ಯದ ಸವುಳು ಹಳ್ಳದ ಕೆರೆ ಮತ್ತು ಗೋಮಾಳ ಜಾಗೆಯನ್ನು ಯಥಾವತ್ತಾಗಿ ಕಾಪಾಡಬೇಕೆಂದು ‘ಸವುಳು ಹಳ್ಳದ ಕೆರೆ ಅಭಿವೃದ್ಧಿ ಸಮಿತಿ’ ಯ ಅಧ್ಯಕ್ಷರಾದ ಮಂಜುನಾಥ ರಾಟಿ, ಉಪಾಧ್ಯಕ್ಷರಾದ ಸುರೇಶ್ ಪಾಟೀಲ್, ಕಾರ್ಯದರ್ಶಿ ಅಮರೇಶ ಕಟ್ಟಿಮನಿ, ಸದಸ್ಯರಾದ ವೀರಣ್ಣ ಕೋಮಲಾಪುರ, ಗ್ರಾಮದ ಮಲ್ಲಿಕಾರ್ಜುನ ಕುರಿ, ನಿಂಗಜ್ಜ ಚೌಧರಿ ಮತ್ತಿತರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 