ವಚನ ಚಳುವಳಿ ಜಗತ್ತಿಗೆ ಮಾನವೀಯತೆ ಮತ್ತು ಸಮಾನತೆ ಸಂದೇಶ ನೀಡಿದೆ : ಜಿಲ್ಲಾಧಿಕಾರಿ

ವಚನ ಚಳುವಳಿ ಜಗತ್ತಿಗೆ ಮಾನವೀಯತೆ ಮತ್ತು ಸಮಾನತೆ ಸಂದೇಶ ನೀಡಿದೆ : ಜಿಲ್ಲಾಧಿಕಾರಿ  Vachana movement has given a message of humanity and equality to the world: District Collector


       ಹಾವೇರಿ 10  : ಬಸವಣ್ಣ ಹಾಗೂ ಅಲ್ಲಮಪ್ರಭು ಅವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಆರಂಭವಾದ ವಚನ ಚಳುವಳಿ ಇಡೀ ಜಗತ್ತಿಗೆ ಮಾನವೀಯತೆ ಮತ್ತು ಸಮಾನತೆಯ ಸಂದೇಶ ನೀಡಿದೆ. ಬಸವ ಕಲ್ಯಾಣದಲ್ಲಿ ನಡೆದ ಅನುಭವಮಂಟಪ ಜಗತ್ತಿಗೆ ಸಂಸತ್‌ನ ಪರಿಕಲ್ಪನೆ  ಮೂಡಿಸಿತು. ಕಾಯಕ ಶರಣರ ವಚನಗಳು ಸಮಸಮಾಜದ  ನಿರ್ಮಾಣದ ದಾರಿ ದೀಪ ಎಂದು ಅಪರ ಜಿಲ್ಲಾಧಿಕಾರಿ ನಾಗರಾಜ ಎಲ್‌. ಅವರು ಹೇಳಿದರು. 

ಹಾವೇರಿ ನಗರದ ಪ್ರವಾಸಿ ತಾಣ ಗಾಂಧಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ   ಮಹಾಪುರುಷರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಶರಣರು ರಚಿಸಿದ ವಚನಗಳು ಜೀವನದ ಗಾಢ ಅರ್ಥಗಳನ್ನು ಒಳಗೊಂಡಿವೆ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಅತೀ ಸೂಕ್ಷ್ಮವಾಗಿ ಮತ್ತು ಸರಳವಾಗಿ ತಿಳಿಸುತ್ತವೆ. ಕಾಯಕ ಶರಣರು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ, ಜಾತಿ ವ್ಯವಸ್ಥೆ ತೊಡೆದುಹಾಕಲು ಶ್ರಮಿಸಿದವರು. ಯಾವ ಕಾಯಕವೂ ಮೇಲಲ್ಲ, ಯಾವ ಕಾಯಕವೂ ಕೀಳಲ್ಲ. ಕಾಯಕ ಮಾಡುವವರೆಲ್ಲರೂ ಸಮಾನರು ಎಂಬ ತತ್ವವನ್ನು ಶರಣರು ಸಾರಿದ್ದಾರೆ. ಅವರ ವಚನ ಮೌಲ್ಯಗಳು ಮತ್ತು ತತ್ತ್ವಗಳನ್ನು ಅರಿತುಕೊಂಡು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದರು. 

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕಾಯಕ ಶರಣರ ವಚನಗಳು ಮುಂದಿನ ಪೀಳಿಗೆಗೆ ತಲುಪಬೇಕು. ವಚನ ಸಾಹಿತ್ಯದ ಮೂಲಕ ಜನರ ಮನಪರಿವರ್ತನೆ ಮತ್ತು ಸಮಾಜದ ಉದ್ದಾರಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಗಳು ನಮ್ಮ ಶರಣರು ಎಂದು ಬಣ್ಣಿಸಿದರು.  

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಕಾಯಕ ಶರಣರು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. 21ನೇ ಶತಮಾನದಲ್ಲಿನ ವಚನಗಳ ಸಾರವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.  

ಹಂಪಿ ಕನ್ನಡ ವಿಶ್ವ ವಿದ್ಯಾಲಯದ  ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಎನ್‌.ಚಿನ್ನಸ್ವಾಮಿ ಸೋಸಲೆ ಅವರು ಕಾಯಕ ಶರಣರ ಜೀವನ ಹಾಗೂ ವಚನ ಸಾಹಿತ್ಯದ ಕುರಿತು  ಉಪನ್ಯಾಸ ನೀಡಿದರು. 

ಇದೇ ಸಂದರ್ಭದಲ್ಲಿ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಮಾಶಾಸನ ಮಂಜೂರಾತಿ ಆದೇಶ ಆದೇಶ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ಸಮಾಜದ ಮುಖಂಡರು ಇತರರು ಉಪಸ್ಥಿತರಿದ್ದರು. 


12th Century Vachana Movement Message to the World Assistant Deputy Commissioner Great Leaders