ವಿಎಸ್‌ಎಸ್‌ಎನ್ ಸೇವೆಯನ್ನು ರಾಜ್ಯದಲ್ಲೆ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು- ಯಳಕಪ್ಪನವರ

ವಿಎಸ್‌ಎಸ್‌ಎನ್ ಸೇವೆಯನ್ನು ರಾಜ್ಯದಲ್ಲೆ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು- ಯಳಕಪ್ಪನವರ VSSN service will be made a model association in the state - Yelakappa

             ಹಗರಿ ಬೊಮ್ಮನಹಳ್ಳಿ  18: ವಿಎಸ್‌ಎಸ್‌ಎನ್ ಸಹಕಾರ ಬ್ಯಾಂಕ್‌ನ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ರಾಜ್ಯದಲ್ಲೆ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು ಎಂದು ತಂಬ್ರಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಸುರೇಶ ಯಳಕಪ್ಪನವರ ತಿಳಿಸಿದರು. ತಾಲೂಕಿನ ತಂಬ್ರಹಳ್ಳಿ ವಿವಿದ್ದೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘಕ್ಕೆ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪುರಸ್ಕಾರ ಪಡೆದ ಬಳಿಕ ಮಾತನಾಡಿದರು.

          ಸಂಘಕ್ಕೆ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್‌ನಿಂದ ಜಿಲ್ಲಾ ಅತ್ಯುತ್ತಮ ಸಂಘ ಪುರಸ್ಕಾರ ಒದಗಿರುವುದು ಸಂತಸ ತಂದಿದೆ. ಅಲ್ಲದೆ ಸಂಘದಲ್ಲಿ ಸೇವೆಯ ಗುಣಮಟ್ಟ ಹೆಚ್ಚಿಸುವ ಚಿಂತನೆಯನ್ನು ಬಲಗೊಳಿಸಿದ್ದು, ಶೀಘ್ರದಲ್ಲೆ ಸಹಕಾರ ಕ್ಷೇತ್ರದ ಹಿರಿಯರ ಸಲಹೆ ಮೇರೆಗೆ ಸೇವೆಯ ಗುಣಮಟ್ಟ ಹೆಚ್ಚಿಸುವ ಪೂರಕ ಕ್ರಮ ಕೈಗೊಳ್ಳಲಾಗುವುದು. ತಂಬ್ರಹಳ್ಳಿ ಸಂಘದ ಕಚೇರಿಯಲ್ಲಿ ನಂ.20ರಂದು ಸಂಘದ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ನಾನಾ ಕ್ಷೇತ್ರದ ಗಣನೀಯ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಕೆಎಂಎಫ್ ಮಾಜಿ ಅಧ್ಯಕ್ಷ ಎಸ್‌.ಭೀಮನಾಯ್ಕ ಉದ್ಘಾಟಿಸಲಿದ್ದಾರೆ ಎಂದರು.   

         ಹೊಸಪೇಟೆಯಲ್ಲಿ ನಡೆದ 72ನೇ ಸಹಕಾರ ಸಪ್ತಾಹದಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ದಾರುಕೇಶ್ವರ, ಬಳ್ಳಾರಿ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಇವರು ಸಂಘದ ತಂಬ್ರಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಸುರೇಶ್ ಯಳಕಪ್ಪನವರ ಮತ್ತು ಮುಖ್ಯ ಕಾರ್ಯನಿರ್ವಾಹಕ ಬಾಚಿನಳ್ಳಿ ಬಸವರಾಜ ಇವರನ್ನು ಪುರಸ್ಕರಿಸಿದರು. ಸಂಘದ ಉಪಾಧ್ಯಕ್ಷೆ ಟಿ.ಹನುಮಂತಮ್ಮ, ನಿರ್ದೇಶಕರಾದ ಸೌಭಾಗ್ಯ ಮೈನಳ್ಳಿ, ಮೈನಳ್ಳಿ ಕೊಟ್ರೇಶಪ್ಪ, ಖಾದರ್‌ಸಾಹೇಬ್, ಯಂಕಪ್ಪ, ವಿರೂಪಾಕ್ಷಪ್ಪ, ಮುಖಂಡರಾದ ಗೌರಜ್ಜನವರ ಗೀರೀಶ್, ರೆಡ್ಡಿ ಮಂಜುನಾಥ ಪಾಟೀಲ್ ಉಪಸ್ಥಿತರಿದ್ದರು.