ಹೊಗೆರಹಿತ ಜೀವನಕ್ಕೆ ಉಜ್ವಲ ಯೋಜನೆ ಅನಿಲ ಸಂಪರ್ಕ ಕಲ್ಪಿಸಲು ಮನವಿ

ಹೊಗೆರಹಿತ ಜೀವನಕ್ಕೆ ಉಜ್ವಲ ಯೋಜನೆ ಅನಿಲ ಸಂಪರ್ಕ ಕಲ್ಪಿಸಲು ಮನವಿ Ujjwala Yojana appeal for gas connection for smoke free life

 ಮುಂಡಗೋಡ 04: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಸಿಗದೆ ನಾವು ವಂಚಿತರಾಗಿದ್ದೇವೆ. ಕೂಡಲೇ ಬಡ್ಡಿಗೇರಿ ಗ್ರಾಮಸ್ಥರಿಗೆ ಹಾಗೂ ತಾಲೂಕಿನ ಇತರೆ ಬಡ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಅನಿಲ ಸಂಪರ್ಕ ಕಲ್ಪಿಸಬೇಕು ಎಂದು ಬಡ್ಡಿಗೇರಿ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಹುಬ್ಬಳ್ಳಿ ಮೂಲದ ಗ್ಯಾಸ್ ಏಜೆನ್ಸಿಯೊಂದು ಉಜ್ವಲ ಯೋಜನೆಯ ಅನಿಲ ಸಂಪರ್ಕ ನೀಡುವುದಾಗಿ ಅಗತ್ಯ ದಾಖಲೆಗಳನ್ನು ಪಡೆದು 4ಹಿ5 ವರ್ಷಗಳಾಗಿವೆ. ಆದರೂ ಇದುವರೆಗೂ ಯಾವುದೇ ಸಿಲಿಂಡರ್, ಗ್ಯಾಸ್ ಒಲೆ ಅಥವಾ ಸಂಪರ್ಕ ನೀಡಿಲ್ಲ. ಈ ಕುರಿತು ಯಾವುದೇ ಮಾಹಿತಿ ನೀಡದೆ ನಮ್ಮನ್ನು ಸತಾಯಿಸಲಾಗುತ್ತಿದೆ. ಇದು ಬಡವರ ಮೇಲೆ ಮಾಡಿರುವ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.  

ಮುಂಡಗೋಡ ತಾಲೂಕಿನವರಿಗೆ ಉಜ್ವಲ ಯೋಜನೆಯ ಸದುಪಯೋಗ ದೊರಕಬೇಕಾದರೆ, ಇಲ್ಲಿನ ಎಚ್‌ಪಿ ಗ್ಯಾಸ್ ವಿತರಣೆ ಮಾಡುತ್ತಿರುವ ‘ಓಂ ಗ್ಯಾಸ್ ಏಜೆನ್ಸಿ’ಗೆ ಉಜ್ವಲ ಯೋಜನೆಯ ಅನಿಲ ಸಂಪರ್ಕ ವಿತರಿಸುವ ಪರವಾನಗಿ ನೀಡಬೇಕು. ಇದರಿಂದ ಬಡ್ಡಿಗೇರಿ ಸೇರಿದಂತೆ ಇನ್ನೂ ಅನೇಕ ವಂಚಿತ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ವೇಳೆ ಕೊಂಡು ಭಾಗು ಗಾವಡೆ ದೊಂಡು, ವಿಠ್ಠು ವಿಸ್ಲೆ ಸೇರಿದಂತೆ ಅನೇಕ ಬಡ್ಡಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರ ಹೇಳುತ್ತಿರುವುದೇನು: ಅಡುಗೆ ಅನಿಲ ಸಂಪರ್ಕ ದೊರೆತರೆ ನಾವು ಹೊಗೆರಹಿತ ಜೀವನ ನಡೆಸಬಹುದು. ಅನಿಲ ಇಲ್ಲದ ಕಾರಣ ಅಡುಗೆಗಾಗಿ ಅರಣ್ಯದ ಕಟ್ಟಿಗೆ ಮೇಲೆ ಅವಲಂಬಿಸಬೇಕಾಗಿದೆ.

ಆದರೆ ಅರಣ್ಯ ಇಲಾಖೆ ಕಟ್ಟಿಗೆ ಸಂಗ್ರಹಿಸಲು ಅವಕಾಶ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಆದ್ದರಿಂದ ಕೂಡಲೇ ಉಜ್ವಲ ಯೋಜನೆಯ ಅಡುಗೆ ಅನಿಲ ಸಂಪರ್ಕ ಕಲ್ಪಿಸಬೇಕು” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹುಬ್ಬಳ್ಳಿ ಏಜೆನ್ಸಿಯವರು ಫೋನ್ ಮಾಡಿದರೆ ಕರೆ ಕಟ್ ಮಾಡುತ್ತಾರೆ. ಮುಂಡಗೋಡಿನಲ್ಲಿ ವಿಚಾರಿಸಿದರೆ, “ಹುಬ್ಬಳ್ಳಿಯ ನೋಂದಣಿ ರದ್ದುಪಡಿಸಿಕೊಂಡು ಬನ್ನಿ” ಎಂದು ಹೇಳುತ್ತಾರೆ.  ಆದರೆ ಒಂದಕ್ಕಿಂತ ಹೆಚ್ಚು ಏಜೆನ್ಸಿಯಲ್ಲಿ ನೋಂದಣಿ ಸಾಧ್ಯವಿಲ್ಲ ಎನ್ನುವುದರಿಂದ ನಾವು ಗೊಂದಲಕ್ಕೆ ಸಿಲುಕಿದ್ದೇವೆ. ಈ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.