ಉಕ್ರೇನ್ ಸಮರ ಕೊನೆಗೊಳಿಸಲು ಟ್ರಂಪ್–ಝೆಲೆನ್ಸ್ಕಿ ಸಭೆ
Trump-Zelensky meeting to end Ukraine war
ಫ್ಲಾರಿಡಾ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತುಕತೆ ನಡೆಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ‘ಯುದ್ಧ ಕೊನೆಗೊಳಿಸುವ ಅಂತಿಮ ಪ್ರಯತ್ನವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಯುದ್ಧ ಅಂತ್ಯಗೊಳಿಸಲು ಯಾವುದೇ ಗಡುವು ವಿಧಿಸಿಲ್ಲ’ ಎಂದು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಝೆಲೆನ್ಸ್ಕಿ ಹಾಗೂ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದಾದ ಸ್ವಲ್ಪ ಹೊತ್ತಿನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಟ್ರಂಪ್ ಮಾತುಕತೆ ನಡೆಸಿದ್ದರು. ಇದರಿಂದ ಹೊಸ ಭರವಸೆ ಮೂಡಿತ್ತು.
ಟ್ರಂಪ್–ಝೆಲೆನ್ಸ್ಕಿ ಸಭೆಯ ಮುಖ್ಯಾಂಶಗಳು...
ರಷ್ಯಾ ಮತ್ತು ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ತುಂಬಾ ಹತ್ತಿರದಲ್ಲಿವೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಝೆಲೆನ್ಸ್ಕಿ ಮಾತನಾಡಿ, ‘ಟ್ರಂಪ್ ಅವರೊಂದಿಗೆ ಉತ್ತಮ ಸಭೆ ನಡೆಸಿದ್ದೇನೆ’ ಎಂದು ಬಣ್ಣಿಸಿದ್ದಾರೆ.
ಟ್ರಂಪ್–ಝೆಲೆನ್ಸ್ಕಿ ಮಾತುಕತೆಗಳ ನಂತರ ರಚಿಸಲಾದ 20 ಅಂಶಗಳ ಶಾಂತಿ ಪ್ರಸ್ತಾವನೆಯ ಸುತ್ತ ಚರ್ಚೆಗಳು ನಡೆಯುತ್ತಿವೆ. ಈ ಪ್ರಸ್ತಾವನೆಯು ಶೇಕಡ 90ರಷ್ಟು ಸಿದ್ಧವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಆದಾಗ್ಯೂ, ಪ್ರಮುಖ ಭಿನ್ನಾಭಿಪ್ರಾಯಗಳು, ವಿಶೇಷವಾಗಿ ಭೂಪ್ರದೇಶಕ್ಕೆ ಸಂಬಂಧಿಸಿದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದಿವೆ.
ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ನ ಸದಸ್ಯತ್ವವನ್ನು ಪ್ರಮುಖ ಭದ್ರತಾ ಆಧಾರಸ್ತಂಭವಾಗಿ ನೋಡಲಾಗುತ್ತಿದೆ. ಈ ವಿಚಾರವಾಗಿ ಯುರೋಪಿಯನ್ ಒಕ್ಕೂಟವು ಒಂದು ನಿರ್ದಿಷ್ಟ ಅವಧಿಗೆ ಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಕರಡು ಯೋಜನೆಯು ಅಮೆರಿಕ ಮತ್ತು ಉಕ್ರೇನ್ ನಡುವಿನ ದ್ವಿಪಕ್ಷೀಯ ಭದ್ರತಾ ಒಪ್ಪಂದವನ್ನು ಒಳಗೊಂಡಿದೆ. ಇದಕ್ಕೆ ಅಮೆರಿಕದ ಕಾಂಗ್ರೆಸ್ನಿಂದ ಅನುಮೋದನೆ ಬೇಕಾಗುತ್ತದೆ. ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳಲ್ಲಿ ಯುರೋಪಿಯನ್ ಮಿಲಿಟರಿ ಸಹಾಯವನ್ನು ಸಹ ಕಲ್ಪಿಸಲಾಗಿದೆ.
ಲಾಭ ಹಂಚಿಕೆ ಸೇರಿದಂತೆ ವಾಷಿಂಗ್ಟನ್, ಕೀವ್ ಮತ್ತು ಮಾಸ್ಕೊ ನಡುವೆ ಪರಮಾಣು ಸ್ಥಾವರದ ಹಂಚಿಕೆಯ ನಿಯಂತ್ರಣದ ಬಗ್ಗೆ ಅಮೆರಿಕ ಪ್ರಸ್ತಾಪಿಸಿದೆ. ಆದರೆ, ಈ ವಿಚಾರವಾಗಿ ಉಕ್ರೇನ್ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಪರಮಾಣು ಸ್ಥಾವರವು ಉಕ್ರೇನ್ ಮತ್ತು ಅಮೆರಿಕ ನಡುವೆ ಜಂಟಿ ಉದ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 