ನಾಳೆ ದಿನಾಂಕ 01-01-2026 ಗುರುವಾರ, ಸಂಜೆ 5.00 ಗಂಟೆಗೆ, ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ

ನಾಳೆ ದಿನಾಂಕ 01-01-2026 ಗುರುವಾರ, ಸಂಜೆ 5.00 ಗಂಟೆಗೆ, ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ Tomorrow, Thursday, 01-01-2026, at 5.00 pm, Teppotsava and musical program

ಕೊಪ್ಪಳ 31: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಇದು ಕೇವಲ ಸಾಂಪ್ರ್ರದಾಯಿಕ ಜಾತ್ರೆಯಾಗಿರದೆ, ಜ್ಞಾನ ವೈಚಾರಿಕತೆ, ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿ ಮುನ್ನಡೆಸುವ ಮಹತ್ವದ ಜಾತ್ರೆಯಾಗಿದೆ. ಇಲ್ಲಿಗೆ ಆಗಮಿಸುವ ಯಾತ್ರಿಕರಲ್ಲಿ ಭಕ್ತಿಯ ಜೊತೆಗೆ ಏನೋ ಆನಂದ ಉತ್ಸಾಹ ಮಡುಗಟ್ಟಿ ನಿಂತಿರುತ್ತದೆ. ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ. ನಾಳೆ ದಿನಾಂಕ 01-01-2026ಗುರುವಾರ, ಸಂಜೆ 5.00 ಗಂಟೆಗೆ, ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಜಿ ಕನ್ನಡ ಖ್ಯಾತಿಯ ಕುಮಾರಿ. ಶಿವಾನಿ ಶಿವದಾಸ ಸ್ವಾಮಿ ಬೀದರ್ ಹಾಗೂ ತಂಡದ ಸಂಗೀತ ಕಲಾವಿದರಿಂದ ಸಂಜೆ 6:00ಗಂಟೆಗೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ. 

ತೆಪ್ಪೋತ್ಸವ: ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕತೃ ಗವಿಶಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ.ತೆಪ್ಪೋತ್ಸವ ಎಂದರೆ ಭಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವೆಂದು ಅರ್ಥ.ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮೂಹೂರ್ತಗೊಳಿಸಿದ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾದಿಗಳು ಹಗ್ಗದ ಮೂಲಕ ಹಾಗೂ ಅಂಬಿಗರ ಸಹಾಯದಿಂದ ಹುಟ್ಟು ಹಾಕಿ ಸಾಗಿಸುತ್ತಾರೆ. 

ಸುಂದರ ವಾತಾವರಣದ ಶುಭ ಸಾಯಂಕಾಲ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳ್ಳಂ ಬೆಳಕಿನ ಕಿರಣಗಳ ಆಗಮನದಲ್ಲಿ ಜರುಗುವ ಈ ಮಹೋತ್ಸವ ಭಕ್ತರನ್ನು ಆನಂದದಲ್ಲಿ ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ದಗೊಳಿಸುತ್ತದೆ.  ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಶ್ರೀ ಗವಿಮಠದ ಆವರಣದಲ್ಲಿ ಪುಷ್ಕರಣಿಯು ಅಕ್ಷರಶಃ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯು ನೋಡಲು ಸುಂದರ, ಮನೋಹರವಾಗಿ ಕಾಣುವುದು.ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪವು ದೈವದ ತೊಟ್ಟಿಲಿನಂತೆ ತೆಲುತ್ತ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಆಸಿನ ಗೊಳಿಸುಕೊಂಡು ತೂಗುತ್ತಾ, ತೊನೆಯುತ್ತಾ ಭಕ್ತರ ಮನಗಳನ್ನು ತಣಿಸುತ್ತದೆ. ಸುಗಂಧ ಭರಿತ ಪುಷ್ಪಗಳಿಂದ ಅಲಂಕಾರಗೊಂಡ ತೆಪ್ಪವು ನೋಡಲು ಸುಂದರ ಮನೋಹರ. ಭವ್ಯ ಮೆರವಣಿಗೆಯಿಂದ ಪಲ್ಲಕ್ಕಿಯಲ್ಲಿ ಸಾವಿರಾರು ಭಕ್ತರ ನಡುವೆ ವಿರಾಜಮಾನರಾದ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತೆಪ್ಪದಲ್ಲಿ ಪ್ರತಿಷ್ಠಾಪಿಸಿದಾಗ ನೆರೆದ ಲಕ್ಷೊಪಲಕ್ಷ ಭಕ್ತರ ಮನವು ಸ್ವರ್ಗವೇ ಧರೆಗಿಳಿದಂತೆ ಪುಳಕಗೊಳ್ಳುವದು.