ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹೆಚ್ಚಾಗಿದೆ-ಉಪ ಲೋಕಾಯುಕ್ತರಾದ ಬಿ.ವೀರ್ಪ
ಹಾವೇರಿ 12: ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹೆಚ್ಚಾಗಿರುತ್ತದೆ. ಕಾನೂನು ಸೇವೆಗಳು ಹಳ್ಳಿಯವರೆಗೆ ತಲುಪಬೇಕು ಆಗ ಮಾತ್ರ ಹಳ್ಳಿಗಳು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಉಪ ಲೋಕಾಯುಕ್ತರಾದ ಬಿ ವೀರ್ಪ ಹೇಳಿದರು.
ನಗರದ ಜಿಲ್ಲಾ ವಕೀಲ ಸಂಘದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ 1988 ರಡಿಯಲ್ಲಿ ವಕೀಲರ ಪಾತ್ರದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಫೋಕ್ಸೋ ಕಾಯ್ದೆಗಳ ಕುರಿತು ಅರಿವು ತರಬೇಕು ಇವೆಲ್ಲವೂ ವಕೀಲರ ಕರ್ತವ್ಯಗಳಾಗಿವೆ ಎಂದರು.
ಸಮಾಜವನ್ನು ಕೆಟ್ಟದಾಗಿ ಬಿಂಬಿಸಬಾರದು, ಹೊರತಾಗಿ ಸಮಾಜವನ್ನು ಉತ್ತುಂಗದತ್ತ ತೆಗೆದುಕೊಂಡು ಹೋಗಲು ಶ್ರಮಿಸಬೇಕು. ಆಗ ಮಾತ್ರ ವಕೀಲ ವೃತ್ತಿಗೆ ಗೌರವ ತಂದಹಾಗೆ ಆಗುತ್ತದೆ ಎಂದರು.
ಹಿರಿಯ ವಕೀಲರು ನಿಮ್ಮ ಬಳಿ ಕಿರಿಯ ವಕೀಲರಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಬೇಕು. ಕಿರಿಯ ವಕೀಲರು ಸತತವಾಗಿ 5 ವರ್ಷಗಳ ಕಾಲ ಕಾಯ, ವಾಚಾ, ಮನಸಾ ಕಷ್ಟಪಟ್ಟು ಕಾರ್ಯನಿರ್ವಹಿಸಿದರೆ ನಿಮ್ಮ ಜೀವನ ಉತ್ತುಂಗಕ್ಕೆ ಹೋಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲ ಕಾರ್ಯಪ್ರವೃತ್ತರಾಗಬೇಕು ಎಂದರು.
ನಾವುಗಳು ಮೊದಲು ನಮ್ಮ ವೃತ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು, ಆಗ ನಮ್ಮ ವೃತ್ತಿಯು ನಮ್ಮನ್ನು ಕಾಪಾಡುತ್ತದೆ. ನಮ್ಮ ಕಕ್ಷಿದಾರರಿಗೆ ಎಂದಿಗೂ ಸುಳ್ಳು ಹೇಳಬಾರದು, ಮೋಸಮಾಡಬಾರದು ನಿಷ್ಠಾವಂತರಾಗಿ ಸಮಾಜಕ್ಕೆ ಏನಾದರು ಒಳಿತು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸ್ವತಂತ್ರಪೂರ್ವದಲ್ಲಿ ಭಾರತದಲ್ಲಿ ಶೇ.18 ಸಾಕ್ಷರತರಿದ್ದರು. ಇಂದು ಅದು ಪ್ರತಿಶತ ಶೇ.80ಕ್ಕೆ ಹೆಚ್ಚಳವಾಗಿದೆ. ಆದರೂ ಕೂಡ ನಮ್ಮ ದೇಶದಲ್ಲಿ ಪ್ರತಿಶತ ಶೇ.90 ರಷ್ಟು ಜನರಿಗೆ ಕಾನೂನು ಅರಿವಿಲ್ಲ, ಇದು ದುರಂತ. ಅಂತಹ ಜನರು ಬುದ್ಧಿವಂತರಿದ್ದಾರೆ. ಆದರೆ ಅವರಗಳು ಮೋಸಹೋಗಿತ್ತಿದ್ದಾರೆ ಇದು ಹೀಗಾಗಬಾರದು ಪ್ರತಿಯೊಬ್ಬ ನಾಗರೀಕನಿಗೂ ಕಾನೂನು ಅರಿವು ತುಂಬಾನೇ ಮುಖ್ಯವಾಗಿರುತ್ತದೆ ಎಂದರು
ಇನ್ನೂ ಲೋಕಾಯುಕ್ತ ಹುದ್ದೆಯ ಬಗ್ಗೆ ಹೇಳಬೇಕೆಂದರೆ, ಲೋಕಾಯುಕ್ತ ಹುದ್ದೆಯು ದೇಶದಲ್ಲಿಯೇ ಕರ್ನಾಟಕ ಲೋಕಾಯುಕ್ತ ಹುದ್ದೆ ತುಂಬಾ ಪ್ರಭಲವಾಗಿದೆ. ಸಮಾಜದಲ್ಲಿ ನಡೆಯುವ ದುರಾಡಳಿತವನ್ನು ತಡೆದು ಸಾರ್ವಜನಿಕರ ಅವಶ್ಯಕತೆಯನ್ನು ಪೂರೈಸುವುದಾಗಿದೆ. ಈ ಹುದ್ದೆಯಿಂದ ಸಮಾಜವನ್ನು ಉತ್ತುಂಗಕ್ಕೂ ತೆಗೆದುಕೊಂಡು ಹೋಗಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ನ್ಯಾಯಾಧೀಶರು, ವಕೀಲ ಸಂಘದ ಅಧ್ಯಕ್ಷ ಎಸ್ ಜತ್ತಿ ಹಾಗೂ ಇತರರು ಉಪಸ್ಥಿತರಿದ್ದರು.