ಟಿ.ಬಿ ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು: ಶಿವಾನಂದ
ಕೊಪ್ಪಳ 04: ಕ್ಷಯರೋಗ ಕಂಡು ಬಂದರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ಯಾರೂ ಸಹ ಟಿ.ಬಿ ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಹಾಗೂ ಕೊಪ್ಪಳದ ಕಾಳಿದಾಸ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ “ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ” ಹಾಗೂ “ಹದಿ-ಹರೆಯದವರ ಆರೋಗ್ಯ ರಕ್ಷಣೆ ಕಾರ್ಯಕ್ರಮ”ದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ಮುಕ್ತ ಅಭಿಯಾನದ ಕಾರ್ಯಕ್ರಮ ನಿಮಿತ್ತ 2024ರ ಡಿಸೆಂಬರ್ 7 ರಿಂದ 2025ರ ಮಾರ್ಚ್ 23ರ ವರೆಗೆ ಜಿಲ್ಲೆಯ್ಯಾದಂತ “ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೀವ್ರತರವಾಗಿ ಕ್ಷಯರೋಗವನ್ನು ಪತ್ಯೆ ಹಚ್ಚುವುದು, ಕ್ಷಯರೋಗದ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಹೊಸ ಕ್ಷಯರೋಗಿಗಳು ಉಲ್ಬಣವಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಗುರಿ ಮತ್ತು ಉದ್ದೇಶವಾಗಿದೆ. ಕ್ಷಯ ಟಿ.ಬಿ ರೋಗವೂ ಸೋಂಕಿತ ರೋಗಿಯು ಕೆಮ್ಮುವುದರ ಮೂಲಕ ಹಾಗೂ ಶೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾಗುತ್ತದೆ. ಒಬ್ಬ ಕ್ಷಯರೋಗಿಯು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಒಂದು ವರ್ಷಕ್ಕೆ 10 ರಿಂದ 15 ಜನರಿಗೆ ಪ್ರಸಾರ ಮಾಡುತ್ತಾನೆ. ಕಾರಣ ಯಾರಿಗಾದರೂ ಸತತ ಎರಡು ವಾರಗಳಿಂದ ಕೆಮ್ಮು ಕಾಣಿಸಿಕೊಂಡರೆ, ಕೆಮ್ಮಿನಲ್ಲಿ ಕಫ ಬಂದರೆ, ಕಫದಲ್ಲಿ ರಕ್ತ ಬಂದರೆ, ತೂಕ ಕಡಿಮೆಯಾದರೆ, ಸಾಯಾಂಕಲ ವೇಳೆ ಜ್ವರ ಬರುವ ಲಕ್ಷಣಗಳು ಇದ್ದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿ, ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಕ್ಷಯರೋಗಿಗಳು ಎಲ್ಲಂದರಲ್ಲಿ ಊಗಳಬಾರದು, ಕೆಮ್ಮುವಾಗ ಮತ್ತು ಶೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ, ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ, ಅವರ ಹತ್ತಿರ ಚರ್ಚಿಸಿ, ಸಲಹೆ ಪಡೆದುಕೊಳ್ಳಬಹುದು. ಕ್ಷಯರೋಗ(ಟಿ.ಬಿ) ನಿರ್ಮೂಲನೆ ಕುರಿತು, ಗ್ರಾಮಗಳಲ್ಲಿ ಕ್ಷಯರೋಗಿಗಳನ್ನು ಪತ್ಯೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ, ಅವರನ್ನು ಗುಣಮುಖರನ್ನಾಗಿ ಮಾಡಬೇಕಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸಹವ್ಯಾಧಿಗಳಿಗೆ ಈ ಕ್ಷಯರೋಗಕ್ಕೆ ಬೇಗನೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮನುಷ್ಯನ ಉಗುರು ಹಾಗೂ ಕೂದಲು ಬಿಟ್ಟು ದೇಹದ ಯಾವುದೇ ಭಾಗಕ್ಕಾದರೂ ಕ್ಷಯರೋಗ(ಟಿ.ಬಿ) ಬರಬಹುದು. ಆದ್ದರಿಂದ ಕ್ಷಯರೋಗದ ಲಕ್ಷಣ ಉಳ್ಳವರು ಖಾಯಿಲೆಯ ಬಗ್ಗೆ ಅಸಡ್ಡೆ ತೊರದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಬೇಕು. 2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು.
ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಅಭಿಯಾನದಡಿಯಲ್ಲಿ ಪೌಷ್ಠಿಕ ಆಹಾರ ಸೇವಿಸಲು ಪ್ರತಿ ರೋಗಿಗೆ ಮಾಸಿಕ 1000 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ರೋಗಿಯ ಮನೆ ಬೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸದರಿ ಖಾಯಿಲೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ, “ಟಿ.ಬಿ ಸೋಲಿಸಿ-ದೇಶ ಗೆಲ್ಲಿಸಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.