ಎಸ್ಸಿ-ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾ ಮೋಸ- ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ್ ಆರೋಪ- ಶೇ. 56 ಮುಂದುವರೆಸಲು ಆಗ್ರಹ

ಎಸ್ಸಿ-ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾ ಮೋಸ- ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ್ ಆರೋಪ- ಶೇ. 56 ಮುಂದುವರೆಸಲು ಆಗ್ರಹ State government cheating SC-ST community - VPA member Hemalatha Nayak accuses in press conference

ಕೊಪ್ಪಳ 02: ಉದ್ಯೋಗಾಂಕ್ಷಿಗಳ ಬೃಹತ್ ಪ್ರತಿಭಟನೆ ಹಾಗೂ ಬಿಜೆಪಿ ಹೋರಾಟದ ಪರಿಣಾಮ ರಾಜ್ಯ ಸರಕಾರ 5,9432 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಆದರೆ ಪ್ರಕ್ರಿಯೆಯನ್ನು ಶೇ. 56ರ ಮೀಸಲಾತಿಯನ್ನು ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಆರೋಪಿಸಿದ್ದಾರೆ.

ನಗರದ ಮೀಡಿಯಾ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್ದಾಸ್ ಆಯೋಗ ರಚಿಸುವಾಗ ಶೇ.56 ಮೀಸಲಾತಿಯೇ ಇತ್ತು. ಸರಕಾರ ಒಳ ಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ  ಅನುಮೋದನೆ ಪಡೆಯುವಾಗಲೂ ಶೇ. 56ರ ಮೀಸಲಾತಿ ಈಗ ಏಕಾಏಕಿ ಶೇ. 50ಕ್ಕೆ ಇಳಿಸಿ ಪರಿಶಿಷ್ಟ ವರ್ಗದ ನಾಯಕರಿಗೆ ಮೋಸ ಮಾಡಿದೆ ಎಂದರು. ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ.

ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ, ಆರೋಗ್ಯ ಇಲಾಖೆಯ ನೌಕರರಿಗೆ ಪಾವತಿಸಬೇಕಾದ ಸಂಬಳದಲ್ಲಿ ನೂರಾರು ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ತನ್ನ ಹುಳುಕನ್ನು ಮುಚ್ಚಿಕೊಳ್ಳಲು ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿ ಯುವಕರ ಕನಸು ನೀರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ ಎಂದರು. 

ಪರಿಶಿಷ್ಟ ಜಾತಿ ಪಂಗಡಗಳಿಗೆ ಸಂಖ್ಯೆಗಳಿಗೆ ಅನುಗುಣವಾಗಿ ಕೊಡಬೇಕಾದ ಮೀಸಲಾತಿಗೆ ಸಾಂವಿಧಾನಿಕವಾದ ಮಾನ್ಯತೆ ಇದೆ. ಇದನ್ನು ಸಮರ್ಥವಾಗಿ ಹೈಕೋರ್ಟ್ನಲ್ಲಿ ಮಂಡಿಸುವಲ್ಲಿ ಸೋತಿರುವ ಸರಕಾರ ಒಳ ಮೀಸಲಾತಿಯಿಂದ ಹಿಂದೆ ಸರಿಯೋ ಬರದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕತ್ತರಿಸಿ ನೇಮಕ ಪ್ರಕ್ರಿಯೆ ಪ್ರಾರಂಭಿಸಲು ಹೊರಟಿರುವುದು ದುರಂತ ಎಂದರು. ಈಗಾಗಲೇ ಈ ಕುರಿತು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಮುಖಂಡರ ಸಭೆ ನಡೆಯಲಿದ್ದು ಸಭೆಯ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು.

ಅಲ್ಲದೆ ಈಗಾಗಲೇ ಸಂಘಟನೆ ಗಳಿಂದ ರಾಜ್ಯವ್ಯಾಪಿ ಹೋರಾಟ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ್ ಬಿಲ್ಗಾರ್, ಮುಖಂಡ ಹನುಮೇಶ ನಾಡಿಗೇರ್, ವಿಜಯ ತಾಳಕೇರಿ, ಗಣೇಶ ಹೊರತಟ್ನಾಳ ಸೇರಿದಂತೆ ಇತರರು ಇದ್ದರು.