ಶ್ರೀ ದುರ್ಗಾದೇವಿ ಜಾತ್ರೆ: ಕಲೆ ಸಂಸ್ಕೃತಿ ನಾಡಿನ ಜೀವಂತಿಕೆ, ಶ್ರೀಮಂತಿಕೆ : ಮಲ್ಲಿಕಾರ್ಜುನ ನಾಗಪ್ಪ

ಶ್ರೀ ದುರ್ಗಾದೇವಿ ಜಾತ್ರೆ: ಕಲೆ ಸಂಸ್ಕೃತಿ ನಾಡಿನ ಜೀವಂತಿಕೆ, ಶ್ರೀಮಂತಿಕೆ : ಮಲ್ಲಿಕಾರ್ಜುನ ನಾಗಪ್ಪ Shri Durgadevi Jatre: Art Culture Vitality, Richness of the Nation : Mallikarjuna Nagappa

ಗಂಗಾವತಿ 19: ವೈಜ್ಞಾನಿಕ ಪ್ರಗತಿ, ಅಭಿವೃದ್ಧಿಯ ಜತೆಗೆ ಕಲೆ ಸಂಸ್ಕೃತಿ, ಸಾಹಿತ್ಯ ನಾಡಿನ ಭವ್ಯ ಪರಂಪರೆ ಸಾರುತ್ತದೆ ಅಲ್ಲದೆ ನಮ್ಮ ಜೀವಂತಿಕೆ, ಶ್ರೀಮಂತಿಕೆಯನ್ನ ಎತ್ತಿ ತೋರಿಸುತ್ತದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹೇಳಿದರು. 

ಅವರು ನಗರದ  ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ವಿಐಪಿ ಮೆಲೋಡಿಸ್, ಜೆಎನ್‌ಎನ್ ಸಂಸ್ಥೆ ಗಂಗಾವತಿ ಹಾಗು   ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್‌ ಉಪ್ಪಾರ ಓಣಿ ಇವುಗಳ ಗಂಗಾವತಿ ಸಹಯೋಗದೊಂದಿಗೆ ಆಯೋಜಿಸಿದ್ದ  ದೇವಿ ದಶಾವತಾರ, ಭಕ್ತಿ ರಸಸಂಜೆ, ಭರತ ನಾಟ್ಯ ಹಾಗು ಪೌರಾಣಿಕ ನಾಟಕಗಳ ಸಂಭಾಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಆಧುನಿಕತೆಯ ಪ್ರಭಾವದಿಂದ ವೇದಿಕೆ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿದ್ದು, ನಾಟಕ, ಜನಪದ ಗೀತೆ, ಬಯಲಾಟ ಇತರೆ ಪೌರಾಣಿಕ ಕಲೆಗಳ ಉಳಿಸುವುದು ಮತ್ತು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಸಾಂಘಿಕವಾಗಿ ಪ್ರಯತ್ನಿಸಬೇಕಾಗಿದೆ, ಅವುಗಳ ಜೀವಂತಿಕೆ ನಮ್ಮ ಪೂರ್ವಜರ ಹೆಜ್ಜೆಗುರುತುಗಳು ಎಂದು ಕಿವಿಮಾತು ಹೇಳಿದರು. ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಅವರು ಮಾತನಾಡಿ, ದುಷ್ಟರ ಶಿಕ್ಷೆ ಶಿಷ್ಟರ ರಕ್ಷಣೆ ಶ್ರೀದೇವಿಯ ಚರಿತ್ರೆಯಿಂದ ತಿಳಿದು ಬರುತ್ತಿದ್ದು, ನೈತಿಕತೆ ಬಿಂಬಿಸುವ ಇಂಥ ದೃಶ್ಯಕಾವ್ಯ ಹಾಡುಗಾರಿಕೆಯಿಂದ ನಮ್ಮ ವ್ಯಕ್ತಿತ್ವ ಉತ್ತಮಗೊಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ವಿಐಪಿ ಮೆಲೋಡಿಸ್ ನ ಪಂಪಾಪತಿ ಇಂಗಳಗಿಯವರು ಶ್ರೀದೇವಿ ಸೇವೆಗಾಗಿ ಸ್ವಂತಿಕೆಯಿಂದ ಹಾಡು ರಚಿಸಿ ರೋಮಾಂಚನಕಾರಿಯಾಗಿ ಹಾಡಿದ್ದು, ಎಸ್‌ಎಸ್‌ಕೆ ಸಮಾಜದ ಮಹಿಳಾ ಮಂಡಳಿ ಸದಸ್ಯರು, ಅಶ್ವಿನಿ ಭರತ ನಾಟ್ಯ ಶಾಲೆ ಕಂಪ್ಲಿ ಇವರು ಅತ್ಯದ್ಭುತವಾಗಿ ಪ್ರದರ್ಶನ ನೀಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಅವರಿಗೆ ಸದಾ ಪ್ರೋತ್ಸಾಹ ನೀಡಲಿದ್ದೇವೆ ಎಂದರು. 

ಈ ಸಂದರ್ಭದಲ್ಲಿ  ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಅಮರಜ್ಯೋತಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಗಂಗಾವತಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ವೆಂಕಟೇಶ್ ಅಮರಜ್ಯೋತಿ, ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್‌ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ,  ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವುಕುಮಾರ್‌ಗೌಡ, ಗಾಯನ ರತ್ನ ಪ್ರಶಸ್ತಿ ಪುರಸ್ಕೃತರು ಹಾಗು ವಿಐಪಿ ಮೆಲೋಡಿಸ್ ಮಾಲಿಕರಾದ ಪಂಪಾಪತಿ ಇಂಗಳಗಿ, ಪ್ರಮುಖರಾದ ಸೈಯ್ಯದ್ ಅಲಿ, ಅನ್ನಪೂರ್ಣ ಸಿಂಗ್, ಗೀತಾ ವಿಕ್ರಮ್, ರಘುನಾಥ ಪವಾರ್ ಇತರರಿದ್ದರು. 

ಎಸ್ ಎಸ್ ಕೆ ಮಹಿಳಾ ಮಂಡಳಿ ಗಂಗಾವತಿ ಇವರ ಶ್ರೀದೇವಿ ದಶಾವತಾರ, ಉತ್ತರ ಕರ್ನಾಟಕ ಖ್ಯಾತ ಗಾಯಕಿ ಮಧುಶ್ರೀಯವರ ಸುಮಧುರ ಗಾಯನ, ಕಂಪ್ಲಿಯ ಅಶ್ವಿನಿ ಭರತ ನಾಟ್ಯ ಶಾಲಾ 60ಕ್ಕು ಹೆಚ್ಚು ಮಕ್ಕಳು ರೋಮಾಂಚನಕಾರಿ ಪ್ರದರ್ಶನ ನೀಡಿದರು. ಪಂಪಾಪತಿ ಇಂಗಳಗಿಯವರು ಸ್ವರಚಿತ ಶ್ರೀದುರ್ಗಾದೇವಿಯ ಗಾಯನ ಜನಮನ ಸೋರೆಗೊಂಡಿತು.