ಕೆಪಿಸಿಸಿ ಸಾರಥ್ಯಕ್ಕೆ ಶಿವಕುಮಾರ್, ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಹೆಸರು ಶಿಫಾರಸ್ಸು

ಕೆಪಿಸಿಸಿ ಸಾರಥ್ಯಕ್ಕೆ ಶಿವಕುಮಾರ್, ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಹೆಸರು ಶಿಫಾರಸ್ಸು congress

ಬೆಂಗಳೂರು,ಡಿ 24- ರಾಜ್ಯದ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಸೋಲಿನ ಬಳಿಕ ಪಕ್ಷದ ಸ್ಥಿತಿಗತಿ ಅವಲೋಕನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ವರಿಷ್ಠ ಮಧುಸೂಧನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳಲು ಮಾಜಿ ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಅರ್ಹರಾಗಿದ್ದು, ಇವರ ಪೈಕಿ ಒಬ್ಬರನ್ನು ಪರಿಗಣಿಸಬಹುದು ಎಂದು ಹೈಕಮಾಂಡ್‌ಗೆ ಶಿಫಾರಸು ಮಾಡಿದೆ.

ಅಧ್ಯಕ್ಷ ಸ್ಥಾನದ‌ ಆಯ್ಕೆ ಸಂಬಂಧ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದ ಮಿಸ್ತ್ರಿ, ಭಕ್ತ ಚರಣ್‍ದಾಸ್ ತಂಡ ಮಂಗಳವಾರ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ವರದಿ ನೀಡಿದೆ. ಅಲ್ಲದೇ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ನಾಯಕನ ಆಯ್ಕೆ ಬಗ್ಗೆಯೂ ಅಭಿಪ್ರಾಯ ತಿಳಿಸಿದೆ ಎನ್ನಲಾಗಿದೆ. ಈ ಸಂಬಂಧ ಜನವರಿ ಮೊದಲ ವಾರದಲ್ಲಿ ಎಐಸಿಸಿಯಿಂದ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಈ ಸಂಬಂಧ ಚರ್ಚಿಸಲು‌ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನವರಿ ತಿಂಗಳಿನಲ್ಲಿ‌  ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ವಿಪಕ್ಷ‌ನಾಯಕರಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.