ಭಿಕ್ಷಾಟನೆ ತಡೆ, ಕಾಣೆಯಾದ ಮಕ್ಕಳ ರಕ್ಷಣೆ ಕುರಿತು ಜನಜಾಗೃತಿ

Public awareness on prevention of begging, protection of missing children

ಭಿಕ್ಷಾಟನೆ ತಡೆ, ಕಾಣೆಯಾದ ಮಕ್ಕಳ ರಕ್ಷಣೆ ಕುರಿತು ಜನಜಾಗೃತಿ 

ಬಳ್ಳಾರಿ 21: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,  ಮಕ್ಕಳ ವಿಶೇಷ ಪೊಲೀಸ್ ಘಟಕ, ಸಖಿ-ಒನ್ ಸ್ಟಾಪ್ ಸೆಂಟರ್ ಇವರ ಸಹಯೋಗದಲ್ಲಿ ನಗರದ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ತಡೆ ಮತ್ತು ಕಾಣೆಯಾದ ಮಕ್ಕಳ ರಕ್ಷಣೆ ಕುರಿತು ಜನಜಾಗೃತಿ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ(ಅಸಾಂಸ್ಥಿಕ ಸೇವೆ) ಚನ್ನಬಸಪ್ಪ ಪಾಟೀಲ್ ಅವರು ಮಾತನಾಡಿ, ‘ಕೆಲವು ಜನರು ಭಿಕ್ಷಾಟನೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದು, ಈ ಪಿಡುಗನ್ನು ಸಮಾಜದಿಂದ ತಡೆಗಟ್ಟಲು ಹಾಗೂ ನಿಷೇಧಿಸಲು ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ, ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಲಲಿತಮ್ಮ ಅವರು ಮಾತನಾಡಿ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ಚಿಂದಿ ಹಾಯುವ ಮಕ್ಕಳು, ಬೀದಿ ಮಕ್ಕಳು, ಕಾಂಇರ್ಕ ಪದ್ಧತಿಯಲ್ಲಿ ತೊಡಗಿರುವ ಮಕ್ಕಳು, ಅನಾಥ ಮಕ್ಕಳು, ಸಾಗಣೆಯಾದ ಮಕ್ಕಳು, ಪರಿತ್ಯಜಿಸಿಲ್ಪಟ್ಟ ಮಕ್ಕಳು, ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ-1098 ಇಲ್ಲವೇ ಪೊಲೀಸ್ ತುರ್ತು ಸೇವೆ ಹಿ 112 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು. ಕಾನೂನು ಪರೀವೀಕ್ಷಣಾಧಿಕಾರಿ ಈಶ್ವರ್ ರಾವ್ ಮಾತನಾಡಿ, ಕಾಣೆಯಾದ ಯಾವುದೇ ಮಗು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ-1098 ಮಾಹಿತಿ ನೀಡಿ, ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ಮಗುವನ್ನು ಒಪ್ಪಿಸಬೇಕು ಎಂದು ಜಾಗೃತಿ ಮೂಡಿಸಿದರು. ಮಕ್ಕಳ ರಕ್ಷಣಾಧಿಕಾರಿ(ಸಾಂಸ್ಥಿಕ ಸೇವೆ) ಮಂಜುನಾಥ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೊಜನೆಗಳ ಕುರಿತು ಜನರಿಗೆ ತಿಳಿಸಿಕೊಟ್ಟರು. ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಆನಂದ ಅವರು ಮಕ್ಕಳ ಸಹಾಯವಾಣಿ-1098 ಕುರಿತ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಸಾರ್ವಜನಿಕರಿಗೆ ಮಕ್ಕಳ ಸಹಾಯವಾಣಿ ಸೇವೆಗಳ ಕುರಿತು ತಿಳಿಸಿದರು. ಈ ವೇಳೆ ಬಸ್ ನಿಲ್ದಾಣದ ಉಸ್ತುವಾರಿ ಅಧಿಕಾರಿ ರಾಜಶೇಖರ್, ನಿಯಂತ್ರಣಾಧಿಕಾರಿ ಪಂಪಾರೆಡ್ಡಿ, ಬಳ್ಳಾರಿ ರೈಲ್ವೇ ನಿಲ್ದಾಣದ ಎಎಸ್‌ಐ ಶಿವಮೂರ್ತಿ, ಪೊಲೀಸ್ ಪೇದೆ  ಶಂಕರ್, ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಅನ್ಸರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ರವಿಕುಮಾರ್, ಹೊನ್ನೂರ​‍್ಪ, ಉಮೇಶ್, ಅರುಳ್ ಆನಂದ್, ಕಾರ್ತಿಕ್, ಸುಧಾ, ನಿಲೋಫಿಯಾ, ಚಂದ್ರಕಳ, ಸಜಿನಿ ಮತ್ತು ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಸಂಯೋಜಕರಾದ ಶಹಜಾನ್, ಸಖಿ-ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿಗಳಾದ ವಿಶಾಲಕ್ಷೀ ಸರಸ್ವತಿ ಹಾಗೂ ನವದುರ್ಗಿ ಪೊಲೀಸ್ ಸಿಬ್ಬಂದಿಯವರು ಭಾಗವಹಿಸಿದ್ದರು.