ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ಅತ್ಯವಶ್ಯಕ - ತಹಶಿಲ್ದಾರ ವಿಠಲ್ ಚೌಗಲಾ
ಕೊಪ್ಪಳ 22:ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ ಹಾಗಾಗಿ ಈ ಕುರಿತು ಮಾಹಿತಿ ನೀಡಲು ಕೇಂದ್ರದಿಂದ ಎನ್.ಡಿ.ಆರ್.ಎಫ್ ತಂಡದವರು ಬಂದು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಕೊಪ್ಪಳ ತಹಶಿಲ್ದಾರ ವಿಠಲ್ ಚೌಗಲಾ ಹೇಳಿದರು.
ಅವರು ಬುಧವಾರ ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎನ್.ಡಿ.ಆರ್.ಎಫ್ ಮತ್ತು ಕೊಪ್ಪಳ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತೆಯ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವಾಹ, ಅಗ್ನಿ ಅವಘಡ, ಗ್ಯಾಸ್ ಸಿಲಿಂಡರ್ ಸ್ಪೋಟ ಸೇರಿದಂತೆ ಇತರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿಯನ್ನು ಎಲ್ಲರೂ ಸರಿಯಾಗಿ ತಿಳಿದುಕೊಂಡು ಇದನ್ನು ತಮ್ಮ ಅಕ್ಕ- ಪಕ್ಕದವರಿಗೂ ತಿಳಿಸಬೇಕೆಂದು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಇನ್ಸ್ಪೆಕ್ಟರ್ ಅಜಯ ಕುಮಾರ್ ಮಾತನಾಡಿ ಪ್ರವಾಹ, ಅಪಘಾತ, ಹೃದಯಾಘಾತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬುದರ ಕುರಿತು ನಮ್ಮ ತಂಡ ಅಣುಕು ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಶಾಲಾ- ಕಾಲೇಜುಗಳ ಮಕ್ಕಳಿಗೆ ಮಾಹಿತಿ ನೀಡಲಿದೆ. ಇದಕ್ಕೆ ಸಂಬಂಧಿಸಿದ ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕೇಳಬಹುದು. ಅದಕ್ಕೆ ಉತ್ತರಿಸಲಾಗುವುದು ಎಂದರು.
ನೈಸರ್ಗಿಕ ಪ್ರಕೃತಿ ವಿಕೋಪಗಳು, ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ, ಕೊಲ್ಡ ಮತ್ತು ಹೀಟ್ ಅಲೆಗಳಾದರೆ, ಮಾನವ ನಿರ್ಮಿತ ವಿಕೋಪಗಳು, ಟ್ರೇನ್, ಡ್ಯಾಂ ಸೇರಿದಂತೆ ಮಾನವನಿಂದ ನಿರ್ಮಿತವಾದವುಗಳಾಗಿವೆ. ಯಾವುದೇ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಿದರೆ ಸಾವಿರಾರು ಜನರ ಜೀವಗಳು ಉಳಿಯುತ್ತವೆ ಎಂದು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹೆಡ್ ಕಾನಸ್ಟೇಬಲ್ ಶಂಕ್ರೆಪ್ಪ ದೂಪದಾಳ ಹಾಗೂ ಕಾನಸ್ಟೇಬಲ್ ವಜ್ರ ಚೇತನ ಅವರು ಅಪಘಾತ, ಹೃದಯಾಘಾತ, ಭೂಕಂಪ, ಗುಡುಗು ಮತ್ತು ಸಿಡಿಲು, ಪ್ರವಾಹ, ಅಗ್ನಿ ಅವಘಡ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಅಣುಕು ಪ್ರದರ್ಶನವನ್ನು ಸಾರ್ವಜನಿಕರು ಹಾಗೂ ಶಾಲಾ-ಕಾಲೇಜುಗಳ ಮಕ್ಕಳಿಗೆ ಸವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಹಿರೇಸಿಂದೋಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರುದ್ರಮುನಿ ಮಠದ, ಅಗ್ನಿಶಾಮಕ ಇಲಾಖೆಯ ಅಧಿಕಾರಿ ನರಸಪ್ಪ, ಅಳವಂಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಲ್ಹಾದ ನಾಯಕ ಸೇರಿದಂತೆ ಹಿರೇಸಿಂದೋಗಿ ಗ್ರಾಮ ಪಂಚಾಯತಿ ಸದಸ್ಯರು, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಗುರುಗಳಾದ ಮಲ್ಲಪ್ಪ ಹಾಗೂ ಈ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ಮಕ್ಕಳು ಮತ್ತು ಹಿರೇಸಿಂದೋಗಿ ಗ್ರಾಮಸ್ಥರು ಉಪಸ್ಥಿತರಿದ್ದರು.