ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ಶಾದಿಮಹಲ್ ನಿರ್ಮಾಣ
ಹಾನಗಲ್ 25: ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ಶಾದಿಮಹಲ್ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಜನಸಂಪರ್ಕ ಸಭೆ ನಡೆಸಿ ಗ್ರಾಮಸ್ಥರ ಅಹವಾಲು, ಸಮಸ್ಯೆಗಳನ್ನು ಕೇಳಿದರು. ಮಳಗಿ ಧರ್ಮಾ ಜಲಾಶಯದಿಂದ ನೀರು ಹರಿಸಬೇಕು, ವಿವಿಧ ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನೀಡಲಾಗುತ್ತಿರುವ ಸಹಾಯ ಧನ ಹೆಚ್ಚಿಸಬೇಕು, ಗ್ರಾಮದ ಕೆಲ ಓಣಿಗಳಲ್ಲಿ ಪಕ್ಕಾ ಗಟಾರ ಇಲ್ಲದೇ ಸಮಸ್ಯೆ ಸೃಷ್ಟಿಯಾಗಿದ್ದು, ನೈರ್ಮಲ್ಯದ ದೃಷ್ಟಿಯಿಂದ ಗಟಾರ ನಿರ್ಮಿಸಬೇಕು ಎನ್ನುವ ಮನವಿಗೆ ಸ್ಪಂದಿಸಿದರು.
ಬಳಿಕ ಮಾತನಾಡಿದ ಅವರು, ಹಿಂದಿನ ಸರಕಾರ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳದೇ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು. ಆ ಎಲ್ಲ ಕಾಮಗಾರಿಗಳಿಗೆ ಅನುದಾನ ದೊರಕಿಸಿದ ಕಾರಣ ಅಭಿವೃದ್ಧಿ ಕೆಲಸ, ಕಾರ್ಯಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಿದೆ. ಕೇಂದ್ರ ಸರಕಾರವೂ ನಮಗೆ ಸಾಥ್ ನೀಡುತ್ತಿಲ್ಲ. ಜಿಎಸ್ಟಿ ರೂಪದಲ್ಲಿ ಸಂಗ್ರಹವಾಗುತ್ತಿರುವ ಆದಾಯವನ್ನೆಲ್ಲ ಉತ್ತರ ಭಾರತದ ರಾಜ್ಯಗಳಿಗೆ ಯಥೇಚ್ಛವಾಗಿ ನೀಡುವ ಮೂಲಕ ನಮಗೆ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ. ಬರಪರಿಹಾರ ಹಣವನ್ನೂ ಕೋರ್ಟ್ ಮೆಟ್ಟಿಲೇರಿ ಪಡೆಯುವಂಥ ದೌರ್ಭಾಗ್ಯ ನಮ್ಮದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ವಸತಿ ಯೋಜನೆಗಳಿಗೆ ನೀಡಲಾಗುವ ಸಹಾಯಧನ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿಸುವ ನೀರೀಕ್ಷೆ ಇದೆ ಎಂದರು.
ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಸನಾವುಲ್ಲಾ ಮುಲ್ಲಾ, ಶಾನೆಅಲಿ ಬಾದಶಾ ಪೀರಾ, ಮುಖಂಡರಾದ ವಿರುಪಾಕ್ಷಪ್ಪ ತಳವಾರ, ಖಾದರಸಾಬ ಮೂಲಿಮನಿ, ಮಾರುತಿ ಇಂಗಳಕಿ, ಹುಲ್ಲಪ್ಪ ಬಾರ್ಕಿ, ದೇವೇಂದ್ರ್ಪ ಭೈರಕ್ಕನವರ, ಶಶಿಧರ ಭೈರಕ್ಕನವರ, ಮುನೀರ್ ಚನ್ನಾಪೂರ, ಮೆಹಬೂಬಖಾನ ಹೊಂಡದ, ಮತೀನ್ ಶಿರಬಡಗಿ, ಅಬ್ದುಲ್ಖಾದರ ಎಣ್ಣಿ ಸೇರಿದಂತೆ ಗ್ರಾಪಂ ಸದಸ್ಯರು,ಮುಖಂಡರು ಇದ್ದರು.