ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನಾಗೇಂದ್ರಕುಮಾರ

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನಾಗೇಂದ್ರಕುಮಾರ Nagendra Kumar appointed as Chairman of Karnataka Handloom Development Corporation

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನಾಗೇಂದ್ರಕುಮಾರ  

ಹುಬ್ಬಳ್ಳಿ 16: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ರೂ.10 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ವಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ನಾಗೇಂದ್ರಕುಮಾರ ಹೇಳಿದರು. ಇಂದು ವಿದ್ಯಾನಗರದ ನೇಕಾರಭವನದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಸುಮಾರು 175 ಸಿಲ್ಕ್‌ ಮತ್ತು 3260 ಕಾಟನ್ ಕೈಮಗ್ಗಗಳು ಸೇರಿದಂತೆ ಒಟ್ಟಾರೆಯಾಗಿ 3435 ಕೈಮಗ್ಗ ನೇಕಾರರಿದ್ದಾರೆ. ಈಗಾಗಲೇ 3868 ಮನೆಗಳನ್ನು ನೇಕಾರರಿಗೆ ಒದಗಿಸಲಾಗಿದೆ. ಅಲ್ಲದೇ ಸುಮಾರು 196 ಮನೆಗಳಿಗಾಗಿ ನೇಕಾರರಿಂದ ಬೇಡಿಕೆ ಸಲ್ಲಿಕೆಯಾಗಿವೆ. ಮುಂದಿನ ದಿನಗಳಲ್ಲಿ ನೇಕಾರರಿಗೆ ಮನೆಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದರು. ಕೈಮಗ್ಗದ ರೇಷ್ಮೆ ಸೀರೆ, ಶಾಲು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಶೇ.20 ರಿಂದ 30 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೈಮಗ್ಗದ ವಸ್ತುಗಳಿಗೆ ಉತ್ಪಾದನೆಗಿಂತ ಹೆಚ್ಚಿನ ಬೇಡಿಕೆಯಿದೆ. ಆರ್ಥಿಕ ಸಂಪನ್ಮೂಲಗಳ ಕೊರತೆಯನ್ನು ಸಹ ಎದುರಿಸುತ್ತಿದ್ದೇವೆ. ಕೈಮಗ್ಗದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಉದ್ಯಮಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ನೇಕಾರರ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ. ನೇಕಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ನಿಗಮವನ್ನು ಯಶಸ್ವಿ ಪಥದತ್ತ ಸಾಗುವಂತೆ ಮಾಡಲಾಗುವುದು. ನಿಗಮದ ಯಶಸ್ವಿಗೆ ಹಗಲಿರುಳು ಶ್ರಮ ವಹಿಸುತ್ತೇನೆ. ನೇಕಾರರ ಪ್ರತಿಯೊಂದು ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ಒದಗಿಸುವೆ. ನೇಕಾರರ ಸಮಸ್ಯೆಗಳನ್ನು ಪರಿಹರಿಸುವುದೇ ನನ್ನ ಧ್ಯೇಯವಾಗಿದೆ. ನೇಕಾರರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದು ಅವರು ವಿವರಿಸಿದರು.