ಇಳಿಮುಖವಾದ ಕಂಪ್ಲಿ ನದಿ ಪ್ರವಾಹ: ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ

ಇಳಿಮುಖವಾದ ಕಂಪ್ಲಿ ನದಿ ಪ್ರವಾಹ: ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ  Kampli River floodwaters recede: Traffic allowed on bridge

ಇಳಿಮುಖವಾದ ಕಂಪ್ಲಿ ನದಿ ಪ್ರವಾಹ: ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ  

ಕಂಪ್ಲಿ 30:  ಕಳೆದ ಮೂರು ದಿನಗಳಿಂದ ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ನೀರಿನ ಪ್ರವಾಹ ಅಧಿಕವಾಗಿ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರು ಸೇರಿದಂತೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಇಂದು ಬೆಳಿಗಿನಿಂದ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದು, ನದಿ ನೀರು ಸೇತುವೆಯ ಕೆಳಗಡೆ ಹರಿಯುತ್ತಿರುವುದರಿಂದ ಸೇತುವೆ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಕಸಕಡ್ಡಿ.ಸಸಿಗಳು ಸೇರಿದಂತೆ ಕಸವನ್ನು ಪುರಸಭೆಯವರು ಹಾಗೂ ಲೋಕೋಪಯೋಗಿ ಇಲಾಖೆಯವರು ಸ್ವಚ್ಛಗೊಳಿಸಿದ್ದು, ಸೇತುವೆ ಸುಭದ್ರವಾಗಿದ್ದು, ಸೇತುವೆ ಮೇಲೆ ಬುಧವಾರ ಮಧ್ಯಾಹ್ನದಿಂದ ಲಘುವಾಹನ ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ ಕಂಪ್ಲಿ ಗಂಗಾವತಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಗಂಗಾವತಿ ನಗರಕ್ಕೆ ತೆರಳಲು ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತೆರಳುವ ರೋಗಿಗಳು,ವಾಣಿಜ್ಯ ವ್ಯವಹಾರಕ್ಕೆ ಹೋಗುವವರು ವಿಜಯನಗರ ಜಿಲ್ಲೆಯ ಬುಕ್ಕಸಾಗರ ಹತ್ತಿರದ ಕಡೇಬಾಗಿಲು ಸೇತುವೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಿತ್ತು. ಅತೀ ಕಡಿಮೆ ಬಸ್ಸುಗಳ ವ್ಯವಸ್ಥೆ ಮತ್ತು ಅಧಿಕ ಹಣ ಭರಿಸಿ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದು ನದಿಯಲ್ಲಿ ಪ್ರವಾಹ ಕಡಿಮೆಯಾಗಿರುವುದರಿಂದ ಮಧ್ಯಾಹ್ನದಿಂದ ಸೇತುವೆಯನ್ನು ಪರೀಶೀಲಿಸಿದ ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ್ ಮತ್ತು ಅಧಿಕಾರಿಗಳು ಸೇತುವೆ ಸುಭದ್ರವಾಗಿದ್ದು,ಸೇತುವೆ ಮೇಲೆ ಭಾರಿ ವಾಹನಗಳನ್ನು ಹೊರತು ಪಡಿಸಿ ಲಘುವಾಹನಗಳ(ದ್ವಿಚಕ್ರ,ತ್ರಿಚಕ್ರ ವಾಹನ)ನ್ನು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಸೇತುವೆ ಮೇಲೆ ಸಂಚರಿಸುವಾಗ ಸಾರ್ವಜನಿಕರು ಹಾಗೂ ಲಘು ವಾಹನಗಳ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ್ ಮನವಿ ಮಾಡಿದ್ದಾರೆ. ಸೇತುವೆ ಮೇಲೆ ನೀರಿಲ್ಲದೇ ಇರುವುದರಿಂದ ಹಾಗೂ ಸೇತುವೆ ಮೇಲೆ ಸಾರ್ವಜನಿಕರ ಹಾಗೂ ಲಘುವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಕಂಪ್ಲಿ ಕೋಟೆ ಭಾಗದ ಜನರು ಸುತ್ತು ಬಳಸಿ ಸಂಚಾರ ಮಾಡುವುದು ತಪ್ಪಿತೆಂದು ನಿಟ್ಟುಸಿರು ಬಿಟ್ಟಿದ್ದಾರೆ. ಕಂಪ್ಲಿ ಭಾಗದಿಂದ ಗಂಗಾವತಿಗೆ ಹಾಗೂ ಗಂಗಾವತಿ ಭಾಗದಿಂದ ಕಂಪ್ಲಿಯ ಕೆಲವು ಶಾಲೆಗಳ ಬಸ್ಸುಗಳು ಸಂಚರಿಸುತ್ತಿದ್ದು, ಸೇತುವೆ ಮೇಲೆ ಶಾಲಾ ವಾಹನಗಳಿಗೆ ಅವಕಾಶ ನೀಡುವಂತೆ ವಿದ್ಯಾರ್ಥಿಗಳ ಪಾಲಕರು,ಶಾಲಾ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.